ನವದೆಹಲಿ: ದೇಶದಾದ್ಯಂತ ಆರ್ಥಿಕ ಮತ್ತು ಸಾಮಾಜಿಕ ದಿಗ್ಬಂಧನವನ್ನು ಮೇ 3ರವರೆಗೆ ವಿಸ್ತರಿಸಿರುವುದನ್ನು ದೇಶಿ ಕೈಗಾರಿಕಾ ವಲಯವು ಸ್ವಾಗತಿಸಿದೆ.
ಮಾನವೀಯ ಬಿಕ್ಕಟ್ಟು ತಪ್ಪಿಸಲು ವಿಸ್ತರಣೆ ಅನಿವಾರ್ಯವಾಗಿತ್ತು. ‘ಕೋವಿಡ್–19’ ಪಿಡುಗಿನಿಂದ ತೀವ್ರವಾಗಿ ಬಾಧಿತವಾಗಿರುವ ಆರ್ಥಿಕತೆಯನ್ನು ಮರು ನಿರ್ಮಾಣ ಮಾಡಲು ಉತ್ತೇಜನಾ ಕೊಡುಗೆ ಪ್ರಕಟಿಸಬೇಕು ಎಂದು ಉದ್ದಿಮೆ ಸಂಘಟನೆಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.
ಮಾರ್ಚ್ನಲ್ಲಿ ಸರ್ಕಾರವು ₹ 1.7 ಲಕ್ಷ ಕೋಟಿ ಮೊತ್ತದ ಪರಿಹಾರ ಕೊಡುಗೆ ಪ್ರಕಟಿಸಿತ್ತು. ಅದೇ ಬಗೆಯ ಎರಡನೇಯ ಕಂತಿನ ಪರಿಹಾರವನ್ನು ಸರ್ಕಾರ ಪ್ರಕಟಿಸಲಿದೆ ಎನ್ನುವ ನಿರೀಕ್ಷೆ ಉದ್ದಿಮೆ ವಲಯದಲ್ಲಿ ಮನೆ ಮಾಡಿದೆ.
‘ದೇಶದಾದ್ಯಂತ ದಿಗ್ಬಂಧನ ಜಾರಿಯಲ್ಲಿ ಇರುವುದರಿಂದ ದೇಶಿ ಅರ್ಥ ವ್ಯವಸ್ಥೆಗೆ ಪ್ರತಿ ದಿನ ₹ 40 ಸಾವಿರ ಕೋಟಿ ನಷ್ಟ ಉಂಟಾಗುತ್ತಿದೆ. ಏಪ್ರಿಲ್ನಿಂದ ಸೆಪ್ಟೆಂಬರ್ ಅವಧಿಯಲ್ಲಿ 4 ಕೋಟಿ ಜನರು ಉದ್ಯೋಗ ಅಭದ್ರತೆ ಎದುರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ತುರ್ತಾಗಿ ಪರಿಹಾರ ಕೊಡುಗೆ ಘೋಷಿಸಬೇಕು’ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ಅಧ್ಯಕ್ಷೆ ಸಂಗೀತಾ ರೆಡ್ಡಿ ಒತ್ತಾಯಿಸಿದ್ದಾರೆ.
‘ದಿಗ್ಬಂಧನ ವಿಸ್ತರಣೆಯಿಂದಾಗಿ ದೊಡ್ಡ ಪ್ರಮಾಣದ ಮಾನವೀಯ ಬಿಕ್ಕಟ್ಟು ಸಂಭವಿಸುವುದನ್ನು ತಡೆಗಟ್ಟಲು ಸಾಧ್ಯವಾಗಲಿದೆ. ವಿಸ್ತರಣೆಯಿಂದಾಗಿ ಆರ್ಥಿಕತೆಯನ್ನು ವ್ಯವಸ್ಥಿತ ಮತ್ತು ಸುರಕ್ಷಿತ ಸ್ವರೂಪದಲ್ಲಿ ಪುನರಾರಂಭಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಕೈಗಾರಿಕೆಗಳೂ ಸೂಕ್ತ ಕಾರ್ಯತಂತ್ರ ರೂಪಿಸಿಕೊಳ್ಳಲು ನೆರವಾಗಲಿದೆ’ ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ ಮಹಾ ನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ ಹೇಳಿದ್ದಾರೆ.
ನಾಸ್ಕಾಂ ಸಲಹೆ: ಲಾಕ್ಡೌನ್ ನಂತರ ಎದುರಾಗಲಿರುವ ಪರಿಸ್ಥಿತಿ ಎದುರಿಸಲು ಸಿದ್ಧತಾ ಕ್ರಮ ಬಲಪಡಿಸುವುದಕ್ಕೆ ದಿಗ್ಬಂಧನ ವಿಸ್ತರಣೆಯು ನೆರವಾಗಲಿದೆ ಎಂದು ಸಾಫ್ಟ್ವೇರ್ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ (ನಾಸ್ಕಾಂ) ಹೇಳಿದೆ.
ಕಡಿಮೆ ಬಾಧಿತ (ಹಸಿರು ವಲಯ) ಪ್ರದೇಶದಲ್ಲಿ ನಿರ್ಬಂಧಗಳನ್ನು ಸಡಿಲುಗೊಳಿಸಲಿರುವುದು ಸ್ವಾಗತಾರ್ಹ ನಿರ್ಧಾರವಾಗಿದೆ. ಸರ್ಕಾರ ಸದ್ಯದಲ್ಲೇ ಪರಿಹಾರ ಕೊಡುಗೆ ಪ್ರಕಟಿಸಿದರೆ ಆರ್ಥಿಕತೆಯನ್ನು ಮರು ನಿರ್ಮಾಣ ಮಾಡುವುದಕ್ಕೆ ಗಮನ ನೀಡಲು ಸಾಧ್ಯವಾಗಲಿದೆ ಎಂದು ತಿಳಿಸಿದೆ.
‘ದಿಗ್ಬಂಧನ ವಿಸ್ತರಣೆ ನಿರ್ಧಾರವು ಉತ್ತಮ ಚಿಂತನೆಯಾಗಿದ್ದು, ಇದೇ 20ರ ನಂತರ ಹಂತ ಹಂತವಾಗಿ ನಿರ್ಬಂಧ ಸಡಿಲಿಸುವುದು ಸ್ವಾಗತಾರ್ಹವಾಗಿದೆ’ ಎಂದು ಜಿಂದಾಲ್ ಸ್ಟೀಲ್ ಆ್ಯಂಡ್ ಪವರ್ನ ಅಧ್ಯಕ್ಷ ನವೀನ್ ಜಿಂದಾಲ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.