ನವದೆಹಲಿ: ಕೋವಿಡ್–19 ಸಾಂಕ್ರಾಮಿಕದ ಕಾರಣದಿಂದಾಗಿ ಹಿಂದಿನ ವರ್ಷ ಸಾಲದ ಕಂತುಗಳ ಮರುಪಾವತಿಗೆ ನೀಡಿದ್ದ ಆರು ತಿಂಗಳ ವಿನಾಯಿತಿ ಅವಧಿಗೆ ಸಾಲಗಾರರಿಗೆ ಚಕ್ರಬಡ್ಡಿ ಅಥವಾ ಬಡ್ಡಿಗೆ ದಂಡ ವಿಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಚಕ್ರಬಡ್ಡಿ ಅಥವಾ ಬಡ್ಡಿಗೆ ದಂಡವನ್ನು ಆ ಅವಧಿಗೆ ಈಗಾಗಲೇ ವಸೂಲು ಮಾಡಿದ್ದರೆ, ಅದನ್ನು ಮರುಪಾವತಿ ಮಾಡಬೇಕು ಎಂದು ಸೂಚಿಸಿದೆ.
ವಿನಾಯಿತಿ ಅವಧಿಯು 2020ರ ಆಗಸ್ಟ್ 31ರ ನಂತರ ವಿಸ್ತರಣೆ ಇಲ್ಲ ಎಂದು ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಂಡ ತೀರ್ಮಾನದಲ್ಲಿ ತಾನು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಕೋರ್ಟ್ ಹೇಳಿದೆ. ‘ಕೇಂದ್ರವು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಕೈಗೊಳ್ಳುವ ನೀತಿ ನಿರ್ಣಯಗಳು ದುರುದ್ದೇಶ ಹೊಂದಿಲ್ಲದಿದ್ದರೆ, ಮನಸೋಇಚ್ಛೆ ತೀರ್ಮಾನ ಅಲ್ಲದಿದ್ದರೆ ಅಂಥವುಗಳನ್ನು ನ್ಯಾಯಾಂಗವು ಪರಾಮರ್ಶಿಸಲು ಆಗದು’ ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ ಹೇಳಿದೆ.
ಸಾಲದ ಕಂತು ಮರುಪಾವತಿಗೆ ನೀಡಿದ್ದ ವಿನಾಯಿತಿ ಅವಧಿಯನ್ನು ವಿಸ್ತರಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳಿಗೆ ಸಂಬಂಧಿಸಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಈ ಮಾತು ಹೇಳಿದೆ. ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಲು ಆಗದು ಎಂದು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.