ADVERTISEMENT

‘ವದಂತಿಗೆ ಕಿವಿಗೊಡದಿದ್ದರೆ ಕುಕ್ಕುಟೋದ್ಯಮ ಸುರಕ್ಷಿತ’

ಕರ್ನಾಟಕ ಪೌಲ್ಟ್ರಿ ಫಾರ್ಮರ್ಸ್‌ ಮತ್ತು ಬ್ರೀಡ್ಸ್‌ ಅಸೋಸಿಯೇಷನ್‌

ವಿಶ್ವನಾಥ ಎಸ್.
Published 7 ಜನವರಿ 2021, 19:23 IST
Last Updated 7 ಜನವರಿ 2021, 19:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೆಲವು ರಾಜ್ಯಗಳಲ್ಲಿ ಕಾಣಿಸಿಕೊಂಡಿರುವ ಹಕ್ಕಿಜ್ವರವು ಕರ್ನಾಟಕದ ಕುಕ್ಕುಟೋದ್ಯಮದ ವಹಿವಾಟಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇಲ್ಲ, ಜನ ವದಂತಿಗಳಿಗೆ ಕಿವಿಗೊಡದಿದ್ದರೆ ವಹಿವಾಟು ಸುರಕ್ಷಿತ ಎಂದು ‘ಕರ್ನಾಟಕ ಪೌಲ್ಟ್ರಿ ಫಾರ್ಮರ್ಸ್‌ ಮತ್ತು ಬ್ರೀಡ್ಸ್‌ ಅಸೋಸಿಯೇಷನ್‌’ ಹೇಳಿದೆ.

‘ಅಸೋಸಿಯೇಷನ್‌ ಹೊರಡಿಸಿರುವ ಮಾರ್ಗಸೂಚಿಗಳನ್ನು ಕೋಳಿ ಸಾಕಣೆ ಕೇಂದ್ರಗಳಲ್ಲಿ ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ. ಸಾಕಣೆ ಕೇಂದ್ರಗಳನ್ನು ಸ್ವಚ್ಛವಾಗಿ ಇರಿಸಲು ಜೈವಿಕ ಭದ್ರತಾ ಕ್ರಮಗಳನ್ನು ಪಾಲಿಸಲಾಗುತ್ತಿದೆ. ಹೀಗಾಗಿ, ಸದ್ಯದ ಮಟ್ಟಿಗೆ ಹಕ್ಕಿಜ್ವರದ ಪರಿಣಾಮ ನಮ್ಮಲ್ಲಿ ಕಾಣಿಸಿಲ್ಲ’ ಎಂದು ಅಸೋಸಿಯೇಷನ್‌ನ ಕಾರ್ಯನಿರ್ವಾಹಕ ಕಾರ್ಯದರ್ಶಿ ಇನಾಯತ್ ಉಲ್ಲಾ ಖಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಭಾರತೀಯ ಶೈಲಿಯಲ್ಲಿ ಕೋಳಿ ಮಾಂಸವನ್ನು ಚೆನ್ನಾಗಿ ಬೇಯಿಸಿದರೆ ಯಾವುದೇ ವೈರಾಣು ಉಳಿಯುವುದಿಲ್ಲ. ಹಕ್ಕಿಜ್ವರಕ್ಕೆ ಸಂಬಂಧಿಸಿದ ವದಂತಿಗಳಿಗೆ ಜನ ಕಿವಿಗೊಟ್ಟರೆ ಮಾತ್ರವೇ ಮಾರಾಟದಲ್ಲಿ ಇಳಿಕೆ ಆಗುವ ಅಪಾಯ ಇದೆ. ಕೋಳಿ ಮಾಂಸ ಸೇವನೆಯಿಂದ ಕೋವಿಡ್‌–19 ಬರುತ್ತದೆ ಎನ್ನುವ ವದಂತಿ ಹರಡಿದ್ದರಿಂದ 2020ರ ಏಪ್ರಿಲ್‌ನಲ್ಲಿ ವಹಿವಾಟಿನ ಮೇಲೆ ತೀವ್ರ ಹೊಡೆತ ಬಿದ್ದಿತ್ತು. ಕೋಳಿ ಮಾಂಸವು ಸೇವನೆಗೆ ಸುರಕ್ಷಿತವಾಗಿದೆ ಎನ್ನುವುದು ಜನರಿಗೆ ಮನವರಿಕೆ ಆದ ನಂತರ ಮಾರಾಟದಲ್ಲಿ ಸುಧಾರಣೆ ಕಂಡಬಂದಿತು. ಲಾಕ್‌ಡೌನ್‌ಗೂ ಮುಂಚೆ ಇದ್ದ ಬೇಡಿಕೆಗೆ ಹೋಲಿಸಿದರೆ ಈಗ ಶೇಕಡ 70ರಿಂದ ಶೇ 80ರಷ್ಟು ಚೇತರಿಕೆ ಕಂಡುಬಂದಿದೆ’ ಎಂದು ಅವರು ಹೇಳಿದರು.

ADVERTISEMENT

ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ತಿನ್ನುವುದರಿಂದ ಯಾವುದೇ ತರಹದ ಸಮಸ್ಯೆ ಆಗುವುದಿಲ್ಲ. ಹಕ್ಕಿಜ್ವರದಿಂದ ಮೊಟ್ಟೆ ಮಾರಾಟದ ಮೇಲೆ ಯಾವುದೇ ಪರಿಣಾಮ ಆಗುವ ಸಾಧ್ಯತೆ ಇಲ್ಲ ಎಂದು ಎನ್‌ಇಸಿಸಿ ಬೆಂಗಳೂರು ವಲಯದ ಅಧ್ಯಕ್ಷ ಬಿ.ಆರ್‌. ಸಾಯಿನಾಥ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.