ADVERTISEMENT

ಕಾರ್ಪೊರೇಟ್ ಆಡಳಿತ: ನಾರಾಯಣಮೂರ್ತಿ ಸಲಹೆ

ಪಿಟಿಐ
Published 21 ಸೆಪ್ಟೆಂಬರ್ 2020, 14:30 IST
Last Updated 21 ಸೆಪ್ಟೆಂಬರ್ 2020, 14:30 IST
ಎನ್.ಆರ್. ನಾರಾಯಣಮೂರ್ತಿ
ಎನ್.ಆರ್. ನಾರಾಯಣಮೂರ್ತಿ   

ನವದೆಹಲಿ: ಕಾರ್ಪೊರೇಟ್ ಆಡಳಿತದಲ್ಲಿ ಲೋಪಕ್ಕೆ ಕಾರಣರಾಗುವ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರನ್ನು ಕಪ್ಪುಪಟ್ಟಿಗೆ ಸೇರಿಸುವ ಕೆಲಸ ಆಗಬೇಕು ಎಂದು ಇನ್ಫೊಸಿಸ್‌ ಸಹಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು ‘ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ’ಗೆ (ಸೆಬಿ) ಸಲಹೆ ನೀಡಿದ್ದಾರೆ.

ಅಂತಹ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ನೀಡಿದ ಸಂಭಾವನೆಯನ್ನು ವಸೂಲು ಮಾಡಬೇಕು ಎಂದೂ ನಾರಾಯಣಮೂರ್ತಿ ಹೇಳಿದ್ದಾರೆ. ದೂರನ್ನು ಆಧರಿಸಿ ನಡೆಯುವ ತನಿಖೆಯ ವಿವರಗಳಲ್ಲಿ ಕಂಪನಿಯ ಸ್ಪರ್ಧಿಗಳಿಗೆ ಅನುಕೂಲ ಆಗುವ ಅಂಶಗಳು ಇಲ್ಲದಿದ್ದರೆ, ಅಂತಹ ವಿವರಗಳನ್ನು ಷೇರುದಾರರಿಗೆ ನೀಡುವ ವ್ಯವಸ್ಥೆಯೂ ಇರಬೇಕು ಎಂದು ಅವರು ಹೇಳಿದ್ದಾರೆ.

ಕಂಪನಿಯ ಆಡಳಿತ ಮಂಡಳಿ ಸದಸ್ಯರು ಹಾಗೂ ಕಂಪನಿಯ ಅಧಿಕಾರಿಗಳು ತಮ್ಮ ಪಾಲಿನ ಜವಾಬ್ದಾರಿ ನಿರ್ವಹಿಸದೆ, ಕಾರ್ಪೊರೇಟ್ ಆಡಳಿತದ ಲೋಪಕ್ಕೆ ಕಾರಣರಾಗಿದ್ದಾರೆ ಎಂಬುದು ತನಿಖೆಯಿಂದ ಸಾಬೀತಾದರೆ ಅವರಿಗೆ ಹುದ್ದೆ ತೊರೆಯುವಂತೆ ತಕ್ಷಣ ಸೂಚಿಸಬೇಕು ಎಂದು ನಾರಾಯಣಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

ಕಂಪನಿಯ ಆಡಳಿತದ ವಿಚಾರವಾಗಿ ದೂರು ನೀಡುವುದು ಅಂದರೆ, ಅತೃಪ್ತ ನೌಕರರು ತಮ್ಮ ಅಸಮಾಧಾನವನ್ನು ಹೊರಹಾಕುವ ಕೆಲಸದಂತೆ ಆಗಬಾರದು. ದೂರು ನೀಡುವವರು ತಮ್ಮ ಮಾತುಗಳಿಗೆ ಪೂರಕವಾಗಿ ಆಧಾರಗಳನ್ನು ನೀಡಬೇಕು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.