ಕೋಲ್ಕತ್ತ: ಇತರೆ ರಾಜ್ಯಗಳಿಗೆ ಆಲೂಗೆಡ್ಡೆ ಮಾರಾಟ ಮಾಡದಂತೆ ಪಶ್ಚಿಮ ಬಂಗಾಳ ಸರ್ಕಾರವು ನಿರ್ಬಂಧ ಹೇರಿದೆ. ಇದನ್ನು ವಾಪಸ್ ಪಡೆಯದಿದ್ದರೆ ಮಂಗಳವಾರದಿಂದ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಬೆಳೆಗಾರರು ಎಚ್ಚರಿಕೆ ನೀಡಿದ್ದಾರೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಆಲೂಗೆಡ್ಡೆ ಧಾರಣೆಯು ₹35ರಿಂದ ₹40 ಇದೆ. ಬೆಲೆ ನಿಯಂತ್ರಿಸುವ ಉದ್ದೇಶದಿಂದ ಸರ್ಕಾರವು ನೆರೆಯ ರಾಜ್ಯಗಳಿಗೆ ಮಾರಾಟ ಮಾಡದಂತೆ ನಿರ್ಬಂಧ ವಿಧಿಸಿದೆ.
ಸರ್ಕಾರದ ಈ ನಿರ್ಣಯದಿಂದಾಗಿ ಅಂತರರಾಜ್ಯದ ಗಡಿ ಭಾಗಗಳಲ್ಲಿ ಪೊಲೀಸರು ಆಲೂಗೆಡ್ಡೆ ಸಾಗಣೆ ಮೇಲೆ ನಿಗಾ ಇಟ್ಟಿದ್ದಾರೆ. ಹಾಗಾಗಿ, ನೂರಾರು ಸರಕು ಸಾಗಣೆ ಲಾರಿಗಳು ಗಡಿ ಭಾಗದಲ್ಲಿ ಸಾಲುಗಟ್ಟಿ ನಿಂತಿವೆ.
ಬೆಲೆ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕೋಲ್ಕತ್ತದಲ್ಲಿ ಆಲೂಗೆಡ್ಡೆ ಸಗಟು ದರ ಕೆ.ಜಿಗೆ ₹27 ಇದೆ. ಹಾಗಿದ್ದರೂ ಚಿಲ್ಲರೆ ದರವು ₹35ರಿಂದ ₹40ಕ್ಕೆ ಮುಟ್ಟಿರುವುದು ಹೇಗೆ ಸಾಧ್ಯ ಎಂದು ಸಗಟು ವ್ಯಾಪಾರಿಗಳು ಪ್ರಶ್ನಿಸಿದ್ದಾರೆ.
‘ಸರ್ಕಾರದ ನಿರ್ಬಂಧದಿಂದಾಗಿ ವ್ಯಾಪಾರಕ್ಕೆ ಪೆಟ್ಟು ಬಿದ್ದಿದೆ. ಕೂಡಲೇ ಆದೇಶವನ್ನು ಹಿಂದಕ್ಕೆ ಪಡೆಯಬೇಕು’ ಎಂದು ಆಲೂಗೆಡ್ಡೆ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಲಾಲು ಮುಖರ್ಜಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.