ಮುಂಬೈ (ಪಿಟಿಐ): ಆ್ಯಪ್ ಮೂಲಕ ಸಾಲ ಕೊಡುವ ಸಂಸ್ಥೆಗಳು ದುಬಾರಿ ಬಡ್ಡಿ ದರ ವಿಧಿಸುತ್ತಿರುವುದರ ಬಗ್ಗೆ ಕಟುವಾಗಿ ಮಾತನಾಡಿರುವ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್, ‘ಹೊಸತನವನ್ನು ಹೊಸಕಿಹಾಕುವ ಬಯಕೆ ಇಲ್ಲ. ಆದರೆ, ಆ್ಯಪ್ಗಳು ನಿಯಮಗಳನ್ನು ಪಾಲಿಸಬೇಕು’ ಎಂದು ಎಚ್ಚರಿಕೆ ನೀಡಿದ್ದಾರೆ.
ಮಹೀಂದ್ರ ಫೈನಾನ್ಸ್ ಕಂಪನಿಯ ಸಾಲ ವಸೂಲಿ ಏಜೆಂಟ್ ಒಬ್ಬ ಬಿಹಾರದಲ್ಲಿ ಗರ್ಭಿಣಿಯೊಬ್ಬಳ ಮೇಲೆ ವಾಹನ ಹತ್ತಿಸಿದ ಘಟನೆ ಈಚೆಗೆ ವರದಿಯಾಗಿದೆ. ಅಲ್ಲದೆ, ಆ್ಯಪ್ಗಳ ಮೂಲಕ ಸಾಲ ಪಡೆದಿದ್ದ ಕೆಲವರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಸೃಷ್ಟಿಯಾಗಿದ್ದರ ಬಗ್ಗೆಯೂ ವರದಿಗಳು ಪ್ರಕಟವಾಗಿವೆ. ಈ ಹಿನ್ನೆಲೆಯಲ್ಲಿ ಗವರ್ನರ್ ಹೇಳಿಕೆ ಮಹತ್ವ ಪಡೆದಿದೆ.
‘ಡಿಜಿಟಲ್ ವೇದಿಕೆಗಳ ಮೂಲಕ ಸಾಲ ಕೊಡುವುದನ್ನು ಆರ್ಬಿಐ ಬೆಂಬಲಿಸುತ್ತದೆ. ಅವರು ಒಂದು ಹೆಜ್ಜೆ ಮುಂದಿರಿಸಿದರೆ, ನಾವು ಎರಡು ಹೆಜ್ಜೆ ಮುಂದಕ್ಕೆ ಇರಿಸುತ್ತೇವೆ. ಆದರೆ, ಹೊಸತನವು ಜವಾಬ್ದಾರಿಯುತವೂ ಆಗಿರಬೇಕು. ಗ್ರಾಹಕರಿಗೆ ಒಳಿತು ಮಾಡುತ್ತಲೇ ಹಣಕಾಸು ವ್ಯವಸ್ಥೆಯ ಗಟ್ಟಿತನವನ್ನು ಹೆಚ್ಚಿಸಬೇಕು’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.