ನವದೆಹಲಿ: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ಸ್ವತಂತ್ರ ನಿರ್ದೇಶಕ ಹುದ್ದೆಗೆ ಸಚಿನ್ ಬನ್ಸಲ್ ರಾಜೀನಾಮೆ ನೀಡಿದ್ದಾರೆ.
ಇ–ಕಾಮರ್ಸ್ನ ದೈತ್ಯ ಸಂಸ್ಥೆ ಫ್ಲಿಪ್ಕಾರ್ಟ್ ಸಹ ಸ್ಥಾಪಕರಾಗಿದ್ದ ಸಚಿನ್, ಅಮೆರಿಕದ ವಾಲ್ಮಾರ್ಟ್ನ ವಶಕ್ಕೆ ಫ್ಲಿಪ್ಕಾರ್ಟ್ ಹೋಗುತ್ತಿದ್ದಂತೆ 2018ರಲ್ಲಿ ಅಲ್ಲಿಂದ ಹೊರ ಬಿದ್ದಿದ್ದರು.
ತಮ್ಮ ಒಡೆತನದಲ್ಲಿ ಇರುವ ಚೈತನ್ಯ ಇಂಡಿಯಾ ಫಿನ್ ಕ್ರೆಡಿಟ್ ಸಂಸ್ಥೆಯು ಪೂರ್ಣ ಪ್ರಮಾಣದ ಬ್ಯಾಂಕಿಂಗ್ ವಹಿವಾಟಿನ ಲೈಸೆನ್ಸ್ ಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ಗೆ ಅರ್ಜಿ ಸಲ್ಲಿಸಿದೆ. ಕಾರ್ಪೊರೇಟ್ ಆಡಳಿತದ ಹಿತದೃಷ್ಟಿಯಿಂದ ಉಜ್ಜೀವನ್ ನಿರ್ದೇಶಕ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವುದಾಗಿ ಸಚಿನ್ ಇದೇ 27ರಂದು ಬರೆದಿರುವ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ನವಿ ಟೆಕ್ನಾಲಜೀಸ್ನ ಸಿಇಒ ಆಗಿರುವಬನ್ಸಲ್ ಅವರು, ಚೈತನ್ಯ ಇಂಡಿಯಾ ಫಿನ್ ಕ್ರೆಡಿಟ್ನಲ್ಲಿ ₹ 739 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದಾರೆ. 2009ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ಹಣಕಾಸು ಸಂಸ್ಥೆಯು ಕರ್ನಾಟಕ, ಬಿಹಾರ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ 40 ಶಾಖೆಗಳನ್ನು ಹೊಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.