ADVERTISEMENT

ಎಸ್‌ಬಿಐ ಮೂಲಕ ನವೋದ್ಯಮಗಳಿಗೆ ಹಣಕಾಸಿನ ನೆರವು

ಭಾರತೀಯ ಸ್ಟೇಟ್‌ ಬ್ಯಾಂಕ್ ಮತ್ತು ಕೆಡಿಇಎಂ ನಡುವೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 14:44 IST
Last Updated 8 ಜುಲೈ 2022, 14:44 IST
ಐ.ಟಿ. ಮತ್ತು ಬಿ.ಟಿ. ಸಚಿವ ಅಶ್ವತ್ಥ ನಾರಾಯಣ ಸಮ್ಮುಖದಲ್ಲಿ ಕೆಡಿಇಎಂ ಹಾಗೂ ಎಸ್‌ಬಿಐ ನಡುವೆ ಬೆಂಗಳೂರಿನಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು.
ಐ.ಟಿ. ಮತ್ತು ಬಿ.ಟಿ. ಸಚಿವ ಅಶ್ವತ್ಥ ನಾರಾಯಣ ಸಮ್ಮುಖದಲ್ಲಿ ಕೆಡಿಇಎಂ ಹಾಗೂ ಎಸ್‌ಬಿಐ ನಡುವೆ ಬೆಂಗಳೂರಿನಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು.   

ಬೆಂಗಳೂರು: ನವೋದ್ಯಮಗಳಿಗೆ ಹಣಕಾಸಿನ ನೆರವು ಒದಗಿಸಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ (ಕೆಡಿಇಎಂ) ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರ ಭಾಗವಾಗಿ ಎಸ್‌ಬಿಐ, ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿನ ‘ಇನ್ನೊವೇಷನ್ ಟವರ್‌’ನಲ್ಲಿ ಪ್ರತ್ಯೇಕ ‘ಸ್ಟಾರ್ಟ್‌ಅಪ್‌ ಡೆಸ್ಕ್‌’ ಆರಂಭಿಸಲಿದೆ.

ಮುಂದಿನ ದಿನಗಳಲ್ಲಿ ಮೈಸೂರು, ಮಂಗಳೂರು ಹಾಗೂ ಹುಬ್ಬಳ್ಳಿ–ಬೆಳಗಾವಿ ಕ್ಲಸ್ಟರ್‌ಗಳಲ್ಲಿ ನವೋದ್ಯಮಗಳಿಗೆ ಹಣಕಾಸಿನ ನೆರವು ಒದಗಿಸುವ ಪ್ರತ್ಯೇಕ ಶಾಖೆಗಳನ್ನು ಆರಂಭಿಸಲು ಎಸ್‌ಬಿಐಗೆ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ (ಕೆಡಿಇಎಂ) ಸಹಾಯ ಮಾಡಲಿದೆ.

ರಾಜ್ಯ ಐ.ಟಿ. ಮತ್ತು ಬಿ.ಟಿ. ಸಚಿವ ಸಿ.ಎನ್. ಅಶ್ವತ್ಥನಾರಾಯಣ, ಎಸ್‌ಬಿಐ ಉಪ ವ್ಯವಸ್ಥಾಪಕ ನಿರ್ದೇಶಕ ರಾಣಾ ಅಶುತೋಷ್ ಕುಮಾರ್ ಸಿಂಗ್ ಸಮ್ಮುಖದಲ್ಲಿ ಈ ವಿಚಾರವಾಗಿ ಕೆಡಿಇಎಂ ಮತ್ತು ಎಸ್‌ಬಿಐ ನಡುವೆ ಶುಕ್ರವಾರ ಒಪ್ಪಂದಕ್ಕೆ ಸಹಿ ಹಾಕಲಾಯಿತು. ನವೋದ್ಯಮಗಳನ್ನು ಗುರಿಯಾಗಿಸಿಕೊಂಡು ಬ್ಯಾಂಕಿಂಗ್‌ ಸಂಸ್ಥೆಯೊಂದು ಈ ಬಗೆಯ ಒಪ್ಪಂದಕ್ಕೆ ಮಾಡಿಕೊಂಡಿರುವುದು ಇದೇ ಮೊದಲು ಎಂದು ಕೆಡಿಇಎಂ ಮತ್ತು ಎಸ್‌ಬಿಐ ಜಂಟಿ ಹೇಳಿಕೆ ತಿಳಿಸಿದೆ.

ADVERTISEMENT

ರಾಜ್ಯ ಸರ್ಕಾರದಿಂದ ಗುರುತಿಸಲ್ಪಟ್ಟ, ಕೆಡಿಇಎಂ ಬೆಂಬಲ ಇರುವ ನವೋದ್ಯಮಗಳಿಗೆ ಸಾಲ ಸೇರಿದಂತೆ ಇತರ ಹಣಕಾಸಿನ ನೆರವು ಒದಗಿಸುವ ವ್ಯವಸ್ಥೆಯನ್ನು ಕಟ್ಟಲು ಈ ಒಪ್ಪಂದದಿಂದಾಗಿ ಎಸ್‌ಬಿಐಗೆ ಸಾಧ್ಯವಾಗಲಿದೆ. ಒಪ್ಪಂದ ಕಾರಣದಿಂದಾಗಿ ಒಂದು ಸಾವಿರಕ್ಕೂ ಹೆಚ್ಚಿನ ನವೋದ್ಯಮಗಳಿಗೆ ನೆರವು ಸಿಗುವ ನಿರೀಕ್ಷೆ ಇದೆ.

‘ತಂತ್ರಜ್ಞಾನ ಕ್ಲಸ್ಟರ್‌ಗಳಾದ ಮಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಮೂರರಿಂದ ಆರು ತಿಂಗಳುಗಳಲ್ಲಿ ನವೋದ್ಯಮಗಳಿಗಾಗಿ ಶಾಖೆ ಆರಂಭಿಸಲು ಎಸ್‌ಬಿಐ ಆಸಕ್ತಿ ತೋರಿಸಿದೆ’ ಎಂದು ಕೆಡಿಇಎಂ ಅಧ್ಯಕ್ಷ ಬಿ.ವಿ. ನಾಯ್ಡು ಹೇಳಿದರು.

‘ಕೋರಮಂಗಲದಲ್ಲಿ ಶಾಖೆ’: ‘ನವೋದ್ಯಮಗಳಿಗೆ ಸುಲಭವಾಗಿ ಸಾಲ ಒದಗಿಸಲು ಪ್ರತ್ಯೇಕ ಶಾಖೆಯನ್ನು ಎಸ್‌ಬಿಐ ಬೆಂಗಳೂರಿನ ಕೋರಮಂಗಲದಲ್ಲಿ ಆರಂಭಿಸಲಿದೆ. ಇದು ಆಗಸ್ಟ್ ತಿಂಗಳಲ್ಲಿ ಆರಂಭವಾಗಲಿದೆ’ ಎಂದು ಐ.ಟಿ. ಮತ್ತು ಬಿ.ಟಿ. ಸಚಿವ ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

'ಕೇಂದ್ರ ಸರ್ಕಾರವು ಅತಿಸಣ್ಣ ಮತ್ತು ಸಣ್ಣ ಉದ್ದಿಮೆಗಳಿಗೆ ಸಾಲ ಸೌಲಭ್ಯ ಖಾತರಿಪಡಿಸಲು ರೂಪಿಸಿರುವ ಸಿಜಿಟಿಎಸ್‌ಎಂಇ ಯೋಜನೆಯ ಅಡಿ ಒಂದು ಉದ್ದಿಮೆಗೆ ₹ 2 ಕೋಟಿವರೆಗೂ ಸಾಲ ಸಿಗುತ್ತಿದೆ. ಇದನ್ನು ಬಳಸಿಕೊಂಡು, ರಾಜ್ಯದಲ್ಲಿ ನವೋದ್ಯಮಗಳಿಗೆ ಹಣಕಾಸಿನ ನೆರವು ಒದಗಿಸಲು ತೀರ್ಮಾನ ಮಾಡಲಾಗಿದೆ’ ಎಂದು ಅಶ್ವತ್ಥನಾರಾಯಣ ಹೇಳಿದರು.

‘ಕರ್ನಾಟಕ ಸರ್ಕಾರದ ಮಾದರಿಯಲ್ಲಿಯೇ ಇತರ ರಾಜ್ಯಗಳೂ ಮುಂದಡಿ ಇರಿಸಿದರೆ, ಇದೇ ಸೌಲಭ್ಯವನ್ನು ಅಲ್ಲಿಯೂ ಆರಂಭಿಸಬಹುದು’ ಎಂದು ರಾಣಾ ಆಶುತೋಷ್ ಕುಮಾರ್ ಸಿಂಗ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.