ADVERTISEMENT

ಷೇರುಪೇಟೆ: ನಿಯಂತ್ರಣಕ್ಕೆ ಬಾರದ ಕರಡಿ ಕುಣಿತ, ಕರಗಿದ ₹ 7.62 ಲಕ್ಷ ಕೋಟಿ ಸಂಪತ್ತು

ದಿನದ 2ನೇ ಅತಿದೊಡ್ಡ ಕುಸಿತ; ಕರಗಿದ ₹ 7.62 ಲಕ್ಷ ಕೋಟಿ ಸಂಪತ್ತು

ಪಿಟಿಐ
Published 16 ಮಾರ್ಚ್ 2020, 19:27 IST
Last Updated 16 ಮಾರ್ಚ್ 2020, 19:27 IST
ಮುಂಬೈ ಷೇರುಪೇಟೆಗೆ ಭೇಟಿ ನೀಡಿದವರ ದೇಹದ ಉಷ್ಣಾಂಶವನ್ನು ಇನ್‌ಫ್ರಾರೆಡ್‌ ಥರ್ಮೊಮೀಟರ್‌ನಿಂದ ಪರೀಕ್ಷಿಸಲಾಯಿತು – ಪಿಟಿಐ ಚಿತ್ರ
ಮುಂಬೈ ಷೇರುಪೇಟೆಗೆ ಭೇಟಿ ನೀಡಿದವರ ದೇಹದ ಉಷ್ಣಾಂಶವನ್ನು ಇನ್‌ಫ್ರಾರೆಡ್‌ ಥರ್ಮೊಮೀಟರ್‌ನಿಂದ ಪರೀಕ್ಷಿಸಲಾಯಿತು – ಪಿಟಿಐ ಚಿತ್ರ   

ಮುಂಬೈ: ಮುಂಬೈ ಷೇರುಪೇಟೆಯಲ್ಲಿನ ಮಹಾ ಕುಸಿತವು ಸೋಮವಾರವೂ ಮುಂದುವರೆಯಿತು. ಶುಕ್ರವಾರವಷ್ಟೇ ಚೇತರಿಕೆ ಕಂಡಿದ್ದ ಪೇಟೆಯು ವಾರದ ಆರಂಭದಲ್ಲಿಯೇ ದೊಡ್ಡ ಮಟ್ಟದಲ್ಲಿ ಮುಗ್ಗರಿಸಿತು.

‘ಕೊರೊನಾ–2’ ವೈರಸ್‌ ಉಂಟು ಮಾಡುತ್ತಿರುವ ಹಾವಳಿಯಿಂದಾಗಿ ವಿಶ್ವದಾದ್ಯಂತ ಆರ್ಥಿಕ, ಸಾಮಾಜಿಕ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗುತ್ತಿದೆ. ಇದರಿಂದಾಗಿ ಜಾಗತಿಕ ಆರ್ಥಿಕತೆಯು ಹಿಂಜರಿತಕ್ಕೆ ಒಳಗಾಗುವ ಭೀತಿ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಏಷ್ಯಾ ಮತ್ತು ಯುರೋಪ್‌ನ ಷೇರುಪೇಟೆಗಳಲ್ಲಿ ವಹಿವಾಟು ಕುಸಿತ ಕಂಡಿತು.

ವಹಿವಾಟು ಸ್ಥಗಿತ: ನ್ಯೂಯಾರ್ಕ್‌ ಷೇರುಪೇಟೆಯಲ್ಲಿ ವಹಿವಾಟು ಆರಂಭದ ಗಂಟೆ ಬಾರಿಸುತ್ತಿದ್ದಂತೆ ಷೇರುಗಳ ಬೆಲೆ ಶೇ 8.1ರಷ್ಟು ಕುಸಿತ ದಾಖಲಿಸಿದವು. ಈ ಕಾರಣಕ್ಕೆ ವಹಿವಾಟನ್ನು 15 ನಿಮಿಷಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ನಾಸ್ದಾಕ್‌ ಕಂಪೊಸಿಟ್‌ ಇಂಡೆಕ್ಸ್‌ ಶೇ 6.1ರಷ್ಟು ಕುಸಿತ ಕಂಡಿತು.

ADVERTISEMENT

ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕವು ದಿನದ ಅಂತ್ಯಕ್ಕೆ 2,713 ಅಂಶ ಕುಸಿತ ಕಂಡು, 31,390 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ದಿನವೊಂದರಲ್ಲಿನ ಎರಡನೇ ಅತಿದೊಡ್ಡ ಕುಸಿತ ಇದಾಗಿದೆ.

ಅರ್ಥ ವ್ಯವಸ್ಥೆಗೆ ಉತ್ತೇಜನ ನೀಡಲು ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರ ಕಡಿತವೂ ಸೇರಿದಂತೆ ಹೊಸದಾಗಿ ಉತ್ತೇಜನ ಕೊಡುಗೆ ಪ್ರಕಟಿಸಿವೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಮಧ್ಯಾಹ್ನ 4 ಗಂಟೆಗೆ ಹಠಾತ್ತಾಗಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಬಡ್ಡಿ ದರ ಕಡಿತದ ಘೋಷಣೆ ಹೊರ ಬೀಳಲಿದೆ ಎನ್ನುವ ನಿರೀಕ್ಷೆ ಗರಿಗೆದರಿತ್ತು. ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅಂತಹ ಘೋಷಣೆಯನ್ನೇನೂ ಮಾಡಲಿಲ್ಲ.

ಹೂಡಿಕೆದಾರರ ಸಂಪತ್ತು ನಷ್ಟ

ಸೋಮವಾರದ ವಹಿವಾಟಿನಲ್ಲಿ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ₹ 7.62 ಲಕ್ಷ ಕೋಟಿ ಕರಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.