ADVERTISEMENT

ಬೇರೆ ದೇಶಗಳಿಗೆ ಬಾಗಿಲು ಮುಚ್ಚುವುದರಿಂದ ಪ್ರಯೋಜನವಿಲ್ಲ: ಮುಖ್ಯ ಆರ್ಥಿಕ ಸಲಹೆಗಾರ

ಪಿಟಿಐ
Published 23 ಜೂನ್ 2020, 17:21 IST
Last Updated 23 ಜೂನ್ 2020, 17:21 IST
-
-   

ಕೋಲ್ಕತ್ತ: ‘ಬೇರೆ ದೇಶಗಳಿಗೆ ಭಾರತದ ಬಾಗಿಲು ಮುಚ್ಚುವುದರಿಂದ ಪ್ರಯೋಜನವೇನೂ ಆಗುವುದಿಲ್ಲ’ ಎಂದು ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಕೃಷ್ಣಮೂರ್ತಿ ವಿ. ಸುಬ್ರಮಣಿಯನ್‌ ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಭಾರತ–ಚೀನಾ ಗಡಿ ಸಂಘರ್ಷದಿಂದ ಆಮದು ಪರ್ಯಾಯ ನೀತಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ವೆಬಿನಾರ್‌ನಲ್ಲಿ ಮಾತನಾಡಿದ ಅವರು, ‘ಕೆಲವೊಂದು ವಿಶೇಷ ಸಂದರ್ಭಗಳಿರುತ್ತವೆ. ಗಡಿಯಲ್ಲಿ ಬಿಕ್ಕಟ್ಟು ಸೃಷ್ಟಿಸುತ್ತಿರುವ ದೇಶಗಳೊಂದಿಗೆ ವಾಣಿಜ್ಯ ವಹಿವಾಟು ಮುಂದುವರಿಯಬೇಕು ಎಂದು ನಾನು ಹೇಳುತ್ತಿಲ್ಲ. ಬೇರೆ ದೇಶಗಳೊಂದಿಗೆ ಪೈಪೋಟಿ ನೀಡಬೇಕೇ ಹೊರತು, ಬೇರೆಯವರನ್ನು ಅಪಮಾನ ಮಾಡುವುದರಿಂದ ಪ್ರಯೋಜನವೇನೂ ಇಲ್ಲ’ ಎಂದಿದ್ದಾರೆ.

ADVERTISEMENT

ದೇಶದಲ್ಲಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಅಭಿಯಾನ ತೀವ್ರಗೊಂಡಿರುವುದನ್ನು ಗಮನದಲ್ಲಿ ಇಟ್ಟುಕೊಂಡು ಅವರು ಮಾತನಾಡಿದ್ದಾರೆ.

ಸದ್ಯದ ಅನಿಶ್ಚಿತ ಸ್ಥಿತಿಯು ಆರೋಗ್ಯಕ್ಕೆ ಸಂಬಂಧಿಸಿದ್ದಾಗಿದೆ. ಕೋವಿಡ್‌ಗೆ ಔಷಧಿ ದೊರೆತ ಬಳಿಕ ಅದು ನಿವಾರಣೆ ಆಗಲಿದೆ. ಜನರು ವಿವೇಚನೆಯಿಂದ ವೆಚ್ಚ ಮಾಡಬೇಕು. ಅಗತ್ಯ ವಸ್ತುಗಳ ಖರೀದಿಗೆ ಮಾತ್ರವೇ ಮುಂದಾಗಬೇಕು ಎಂದೂ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.