ADVERTISEMENT

₹5 ಕೋಟಿಗೂ ಮೀರಿದ ತೆರಿಗೆ ವಂಚನೆಯ ತನಿಖೆಗೆ ಅವಕಾಶ: ಹಣಕಾಸು ಸಚಿವಾಲಯ

ಪಿಟಿಐ
Published 2 ಸೆಪ್ಟೆಂಬರ್ 2022, 15:27 IST
Last Updated 2 ಸೆಪ್ಟೆಂಬರ್ 2022, 15:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ₹5 ಕೋಟಿಗೂ ಹೆಚ್ಚಿನ ಮೊತ್ತದ ಜಿಎಸ್‌ಟಿ ವಂಚನೆ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಅಧಿಕಾರಿಗಳು ತನಿಖೆ ಆರಂಭಿಸಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಶುಕ್ರವಾರ ಹೇಳಿದೆ.

ಆದರೆ, ತೆರಿಗೆ ವಂಚನೆಯ ಹಿನ್ನೆಲೆ ಇರುವವರು ಅಥವಾ ವಿಚಾರಣೆಯ ಸಂದರ್ಭದಲ್ಲಿ ತಪ್ಪಿತಸ್ಥರನ್ನು ಬಂಧಿಸಿದ್ದರೆ ಅಂತಹ ಸಂದರ್ಭಗಳಲ್ಲಿ ವಂಚನೆ ಮೊತ್ತದ ಮಿತಿಯು ₹ 5 ಕೋಟಿಗೂ ಹೆಚ್ಚು ಇರಬೇಕು ಎಂದೇನೂ ಇಲ್ಲ ಎಂದು ತಿಳಿಸಿದೆ.

ತೆರಿಗೆ ಅಧಿಕಾರಿಗಳು ತನಿಖೆ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ತನಿಖಾ ವಿಭಾಗವು ಶುಕ್ರವಾರ ಕೆಲವೊಂದು ಸೂಚನೆಗಳನ್ನು ನೀಡಿದೆ. ತನಿಖೆ ಆರಂಭಿಸಲು ಪೂರಕ ಸಾಕ್ಷ್ಯಗಳು ಲಭ್ಯವಿರುವುದು ಮುಖ್ಯವಾಗುತ್ತದೆ ಎಂದು ಅದು ತಿಳಿಸಿದೆ.

ವಿಚಾರಣೆ ವೇಳೆ ತಪ್ಪಿತಸ್ಥರನ್ನು ಬಂಧಿಸಿದ್ದು, ಜಾಮೀನು ಸಿಗದೇ ಇದ್ದರೆ, ವ್ಯಕ್ತಿಯನ್ನು ಬಂಧಿಸಿದ 60 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬೇಕು. ಅಪರಾಧದ ಸ್ವರೂಪ ಮತ್ತು ತೀವ್ರತೆ, ತೆರಿಗೆ ವಂಚನೆಯ ಪ್ರಮಾಣದ ಆಧಾರದ ಮೇಲೆ ಪ್ರಕರಣದಿಂದ ಪ್ರಕರಣಕ್ಕೆ ನಿರ್ಧಾರಗಳು ಬದಲಾಗಬೇಕು ಎಂದೂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.