ADVERTISEMENT

ಟೆಲಿಕಾಂ ವಹಿವಾಟು ಸುಲಲಿತ ಆಗಲಿ : ಬಿಐಎಫ್

ಪಿಟಿಐ
Published 13 ಸೆಪ್ಟೆಂಬರ್ 2020, 14:35 IST
Last Updated 13 ಸೆಪ್ಟೆಂಬರ್ 2020, 14:35 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ:ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್‌) ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ದೂರಸಂಪರ್ಕ ಕಂಪನಿಗಳಿಗೆ ಮುಂದಿನ ಹೆಜ್ಜೆಗಳ ಕುರಿತು ಸ್ಪಷ್ಟತೆ ತಂದುಕೊಟ್ಟಿರುವ ಕಾರಣ, ಈ ವಲಯವನ್ನು ಲಾಭದಾಯಕ ಆಗಿಸಲು ಕೇಂದ್ರ ದೂರಪಸಂಪರ್ಕ ಇಲಾಖೆ ಗಮನ ನೀಡಬೇಕು ಎಂದು ‘ಬ್ರಾಡ್‌ಬ್ಯಾಂಡ್‌ ಇಂಡಿಯಾ ಫೋರಂ’ (ಬಿಐಎಫ್‌) ಹೇಳಿದೆ.

ದೂರಸಂಪರ್ಕ ವಲಯವು ಹೂಡಿಕೆದಾರರಿಗೆ ಆಕರ್ಷಕ ಅನಿಸುವಂತೆ ಮಾಡಬೇಕು, ಈ ವಲಯದಲ್ಲಿನ ವಾಣಿಜ್ಯ ವಹಿವಾಟುಗಳು ಸುಲಲಿತ ಆಗಬೇಕು, ಹೊರೆ ಅನಿಸುವಂತಹ ತೆರಿಗೆ ಪ್ರಮಾಣ ಕಡಿಮೆ ಆಗಬೇಕು ಎಂದು ಕೂಡ ಅದು ಹೇಳಿದೆ.

ಬ್ರಾಡ್‌ಬ್ಯಾಂಡ್‌ ಸೇವೆಗಳನ್ನು ಹೆಚ್ಚು ವ್ಯಾಪಕಗೊಳಿಸಲು ನೆರವಾಗುವ ‘ಸಾರ್ವಜನಿಕ ವೈ–ಫೈ’ ಕುರಿತ ಶಿಫಾರಸು ಸೇರಿದಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮಾಡಿರುವ ಇತರ ಹಲವು ಶಿಫಾರಸುಗಳ ವಿಚಾರವಾಗಿ ಇಲಾಖೆ ತಕ್ಷಣ ತೀರ್ಮಾನ ಕೈಗೊಳ್ಳಬೇಕು ಎಂದು ಬಿಐಎಫ್ ಒತ್ತಾಯಿಸಿದೆ.

ADVERTISEMENT

‘ದೂರಸಂಪರ್ಕ ಉದ್ಯಮವನ್ನು ಲಾಭದಾಯಕ ಆಗಿ ಮಾಡುವುದು ಹೇಗೆ, ಈ ಉದ್ಯಮವನ್ನು ಹೂಡಿಕೆದಾರರಿಗೆ ಆಕರ್ಷಕವಾಗಿ ಮಾಡುವುದು ಹೇಗೆ ಎಂಬ ಬಗ್ಗೆ ಸರ್ಕಾರ ಗಮನ ನೀಡಬೇಕು. ದೇಶಕ್ಕೆ ಬಂಡವಾಳ ಹರಿದುಬರಬೇಕು ಎಂದಾದರೆ, ವಾಣಿಜ್ಯೋದ್ಯಮ ವಹಿವಾಟುಗಳು ಸುಲಲಿತ ಆಗಬೇಕು’ ಎಂದು ಬಿಐಎಫ್ ಅಧ್ಯಕ್ಷ ಟಿ.ವಿ. ರಾಮಚಂದ್ರನ್ ಹೇಳಿದರು.

ಟ್ರಾಯ್‌ ಮಾಡಿರುವ ಹಲವು ಶಿಫಾರಸುಗಳನ್ನು ಇಲಾಖೆಗೆ ಈಗಾಗಲೇ ರವಾನಿಸಲಾಗಿದೆ. ಆದರೆ, ಅವು ಅನುಷ್ಠಾನಕ್ಕೆ ಬಂದಿಲ್ಲ. ಈಗ ಅವುಗಳನ್ನು ಅನುಷ್ಠಾನಕ್ಕೆ ತರಬೇಕು. ಹಾಗೆಯೇ, ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿಯ ಅಂಶಗಳನ್ನು ಕೂಡ ಆದಷ್ಟು ಬೇಗ ಕಾರ್ಯರೂಪಕ್ಕೆ ತರಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.