ADVERTISEMENT

Explainer | ಯೆಸ್‌ ಬ್ಯಾಂಕ್ ಕುಸಿಯಲು ಎಷ್ಟೆಲ್ಲಾ ಕಾರಣಗಳು? ಮುಂದೇನಾಗುತ್ತೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಮಾರ್ಚ್ 2020, 7:10 IST
Last Updated 6 ಮಾರ್ಚ್ 2020, 7:10 IST
   

ಭಾರತದ 5ನೇ ಅತಿದೊಡ್ಡ ಖಾಸಗಿ ಬ್ಯಾಂಕ್ ಎನಿಸಿದ್ದ ಯೆಸ್‌ ಬ್ಯಾಂಕ್‌ನಆಡಳಿತವನ್ನು ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತನ್ನ ಸುಪರ್ದಿಗೆ ತೆಗೆದುಕೊಂಡಿದೆ.ವಹಿವಾಟಿನ ಮೇಲೆ ಕಟ್ಟುನಿಟ್ಟಿನ ಮಿತಿಗಳನ್ನು ವಿಧಿಸಿದೆ. ಬ್ಯಾಂಕ್ ಉಳಿಸಲು ಇರುವ ಸಾಧ್ಯತೆಗಳನ್ನು ಆರ್‌ಬಿಐ ಇದೀಗ ಪರಿಶೀಲಿಸುತ್ತಿದೆ.

ಬಂಡವಾಳ ಸಂಚಯಿಸುವಲ್ಲಿನ ವೈಫಲ್ಯವೇಯೆಸ್ ಬ್ಯಾಂಕ್‌ನ ಸ್ಥಿತಿ ಬಿಗಡಾಯಿಸಲು ಮುಖ್ಯ ಕಾರಣ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಈಚಿನ ಕೆಲ ವರ್ಷಗಳಲ್ಲಿ ಯೆಸ್‌ ಬ್ಯಾಂಕ್‌ನಲ್ಲಿಹಲವು ಗಂಭೀರ ಆಡಳಿತಾತ್ಮಕ ಲೋಪಗಳೂ ವರದಿಯಾಗಿದ್ದವು. ಈಗ ಬ್ಯಾಂಕ್ ತಲುಪಿರುವ ಸ್ಥಿತಿಗೆ ಇವೆಲ್ಲವೂ ಕಾರಣ.

ಸಾಲ ಮರುಪಾವತಿಸಮಸ್ಯೆಯಿಂದಕಂಗಾಲಾಗಿದ್ದ ಯೆಸ್‌ ಬ್ಯಾಂಕ್‌ ಮೇಲೆ ಹೂಡಿಕೆದಾರರ ವಿಶ್ವಾಸವೂ ಕಡಿಮೆಯಾಗಿತ್ತು. ಒಂದೆಡೆ ಸಕಾಲಕ್ಕೆ ಸಾಲ ಮರುಪಾವತಿಯಾಗಲಿಲ್ಲ, ಇನ್ನೊಂದೆಡೆ ಹೂಡಿಕೆದಾರರಿಂದಲೂ ಹೊಸ ಬಂಡವಾಳ ಹರಿದುಬರಲಿಲ್ಲ. ಎರಡು ಶತಕೋಟಿ ಡಾಲರ್‌ ಹೊಸ ಬಂಡವಾಳ ಸಂಚಯಿಸಲು ಯೆಸ್‌ ಬ್ಯಾಂಕ್ ಒಂದು ವರ್ಷದಿಂದ ಪ್ರಯತ್ನಪಟ್ಟಿತ್ತು. ಸಂಕಷ್ಟ ಸ್ಥಿತಿಯ ಕಾರಣಕ್ಕೇ ಡಿಸೆಂಬರ್‌ ತ್ರೈಮಾಸಿಕದ ಫಲಿತಾಂಶ ಘೋಷಣೆಯನ್ನು ಫೆಬ್ರುವರಿಯಲ್ಲಿ ತಡ ಮಾಡಿತ್ತು.

ADVERTISEMENT

ಯೆಸ್‌ ಬ್ಯಾಂಕ್‌ನ ಶೇ 11.5ರಷ್ಟುಸಾಲಗಳನ್ನುರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಶಾಡೊ ಲೆಂಡರ್ಸ್‌ಗೆ (ಬ್ಯಾಂಕೇತರ ಹಣಕಾಸುವಹಿವಾಟು) ಪಡೆದಿದ್ದಾರೆ ಎಂದು ಸೆಪ್ಟೆಂಬರ್ 2018ರಲ್ಲಿ ಬ್ಲೂಂಬರ್ಗ್ ವರದಿ ಮಾಡಿತ್ತು.

ಯೆಸ್‌ ಬ್ಯಾಂಕ್‌ನಿಂದ ಹಣ ಪಡೆದು ಚಿಲ್ಲರೆ ಸಾಲವಾಗಿ ನೀಡಿದ್ದಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ವಸೂಲಾತಿ ಸಮಸ್ಯೆ ಎದುರಾದ ನಂತರ ಯೆಸ್‌ ಬ್ಯಾಂಕ್‌ನ ಆರ್ಥಿಕ ಸ್ಥಿರತೆಗೆ ಆತಂಕ ಕಂಡುಬಂತು. ಸೆಪ್ಟೆಂಬರ್ 2018ರ ನಂತರ ಐಎಲ್‌ಎಫ್‌ಎಸ್‌ಗೆ(ಇನ್‌ಫ್ರಾಸ್ಟ್ರಕ್ಚರ್ ಲೀಸಿಂಗ್ ಅಂಡ್ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್) ಪಾವತಿಸಬೇಕಾದ ಹಣವನ್ನು ಸಕಾಲದಲ್ಲಿ ಕೊಡಲು ಆಗಲಿಲ್ಲ.

ಯೆಸ್‌ ಬ್ಯಾಂಕ್‌ಗೆ ಮರುಜೀವ, ಹೊಸ ಬಂಡವಾಳ ತುಂಬಲುಆರ್‌ಬಿಐ ಕೆಲ ದಿನಗಳಿಂದೀಚೆಗೆ ಪ್ರಯತ್ನಗಳನ್ನು ಆರಂಭಿಸಿತ್ತು. ಬ್ಯಾಂಕ್‌ನ ಆಡಳಿತ ಮಂಡಳಿ ಜೊತೆಗೆ ನಿಯಮಿತ ಸಂಪರ್ಕದಲ್ಲಿತ್ತು.ಕೆಲ ಖಾಸಗಿ ಹೂಡಿಕೆದಾರರನ್ನೂ ಆರ್‌ಬಿಐ ಅಧಿಕಾರಿಗಳು ಸಂಪರ್ಕಿಸಿ,ಬ್ಯಾಂಕ್‌ಗೆ ಬಂಡವಾಳ ಮರುಪೂರಣದ ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದರು. ಪರಿಸ್ಥಿತಿ ಕೈಮೀರುತ್ತಿದೆ ಎಂದು ಮನವರಿಕೆಯಾದ ನಂತರ ಇಡಿಯಾಗಿ ಬ್ಯಾಂಕ್‌ನ ಆಡಳಿತವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತು.

ಯೆಸ್‌ ಬ್ಯಾಂಕ್ ಪುನರುಜ್ಜೀವನದ ಹೊಣೆಯನ್ನು ಆರ್‌ಬಿಐ ಇದೀಗ ಭಾರತೀಯ ಸ್ಟೇಟ್‌ ಬ್ಯಾಂಕ್‌(ಎಸ್‌ಬಿಐ) ನೇತೃತ್ವದ ಬ್ಯಾಂಕರ್‌ಗಳ ಒಕ್ಕೂಟಕ್ಕೆವಹಿಸಿಕೊಟ್ಟಿದೆ. ಒಕ್ಕೂಟದಲ್ಲಿ ಯಾರೆಲ್ಲಾ ಇರಬಹುದು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಲು ಎಸ್‌ಬಿಐ ವಿವೇಚನೆಗೆ ಬಿಡಲಾಗಿದೆ ಎಂದು ಬ್ಲೂಂಬರ್ಗ್‌ ಜಾಲತಾಣ ವರದಿ ಮಾಡಿದೆ.

ಯೆಸ್‌ ಬ್ಯಾಂಕ್‌ನ ಸದ್ಯದ ಸ್ಥಿತಿಗತಿ ಬಗ್ಗೆ ವಿಸ್ತೃತ ಪರಿಶೀಲನೆ ನಡೆಸಲುಗುರುವಾರ ಎಸ್‌ಬಿಐ ಒಪ್ಪಿಕೊಂಡಿತ್ತು. ಯೆಸ್‌ ಬ್ಯಾಂಕ್‌ನ ಸಿಇಒ ರನ್‌ವೀತ್ ಗಿಲ್ ಸಹಿತ ಇತರ ಆಡಳಿತ ಮಂಡಳಿ ಸದಸ್ಯರನ್ನು ಬದಲಿಸುವ ಸಾಧ್ಯತೆ ಇದೆ ಎಂದು ರಾಯಿಟರ್ಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆರು ತಿಂಗಳ ಹಿಂದಷ್ಟೇ ಹಗರಣವೊಂದು ಪತ್ತೆಯಾದ ಹಿನ್ನೆಲೆಯಲ್ಲಿಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್‌ ವಿರುದ್ಧ ಆರ್‌ಬಿಐ ಇಂಥದ್ದೇ ಕ್ರಮಗಳನ್ನು ಜರುಗಿಸಿತ್ತು. ಬ್ಯಾಂಕೇತರ ಹಣಕಾಸು ಸಂಸ್ಥೆ ದಿವಾನ್ ಹೌಸಿಂಗ್ ಫೈನಾನ್ಸ್‌ ಕಾರ್ಪೊರೇಷನ್ ವಿರುದ್ಧವೂ ಕಳೆದ ವರ್ಷ ಆರ್‌ಬಿಐ ಶಿಸ್ತುಕ್ರಮ ಜರುಗಿಸಿ, ದಿವಾಳಿ ಘೋಷಣೆಗೆ ಕ್ರಮಗಳನ್ನು ಆರಂಭಿಸಿತ್ತು.

ಕಾರ್ಪೊರೇಟ್ ಆಡಳಿತದ ನಿಯಮಗಳನ್ನು ಉಲ್ಲಂಘಿಸಿದ ಬ್ಯಾಂಕ್ ಆಫ್ ರಾಜಸ್ಥಾನ್ ವಿರುದ್ಧ ಶಿಸ್ತುಕ್ರಮ ಜರುಗಿಸಿದ್ದ ಆರ್‌ಬಿಐ, ಅದನ್ನು ಐಸಿಐಸಿಐ ಬ್ಯಾಂಕ್‌ ಜೊತೆಗೆ ವಿಲೀನಗೊಳಿಸಲು 2010ರಲ್ಲಿ ಕ್ರಮ ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.