ನವದೆಹಲಿ: ಅಡುಗೆ ಮನೆ ಉಪಕರಣಗಳ ತಯಾರಿಕಾ ವಲಯದಲ್ಲಿ ದೇಶದ ಅತಿದೊಡ್ಡ ಕಂಪನಿ ಟಿಟಿಕೆ ಪ್ರೆಸ್ಟೀಜ್ನ ಅಧ್ಯಕ್ಷ ಟಿ.ಟಿ. ಜಗನ್ನಾಥನ್ (77) ಅವರು ಬೆಂಗಳೂರಿನಲ್ಲಿ ಗುರುವಾರ ನಿಧನರಾದರು. ಜಗನ್ನಾಥನ್ ಅವರು ‘ಅಡುಗೆ ಮನೆಯ ಸಾಮ್ರಾಟ’ ಎಂದೇ ಪ್ರಸಿದ್ಧರಾಗಿದ್ದರು.
ಐಐಟಿ ಚೆನ್ನೈನಿಂದ ಚಿನ್ನದ ಪದಕ ಪಡೆದಿದ್ದ ಜಗನ್ನಾಥನ್, ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪಡೆದಿದ್ದರು. ಕಳೆದ 50 ವರ್ಷದಿಂದ ಟಿಟಿಕೆ ಪ್ರೆಸ್ಟೀಜ್ನ ಆಡಳಿತ ಮಂಡಳಿಯಲ್ಲಿದ್ದರು. ಇವರ ಅಜ್ಜ ಹಾಗೂ ಕೇಂದ್ರ ಹಣಕಾಸು ಇಲಾಖೆಯ ಮಾಜಿ ಸಚಿವರಾಗಿದ್ದ ಟಿ.ಟಿ. ಕೃಷ್ಣಮಾಚಾರಿ 1928ರಲ್ಲಿ ಈ ಕಂಪನಿಯನ್ನು ಸ್ಥಾಪಿಸಿದ್ದರು.
1975ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಜಗನ್ನಾಥನ್ ಕಂಪನಿ ಸೇರಿದರು. 2000ವರೆಗೆ ಇದೇ ಹುದ್ದೆಯಲ್ಲಿ ಮುಂದುವರಿದ ಅವರು ಬಳಿಕ 19 ವರ್ಷ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದರು. 2019ರಲ್ಲಿ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನದಿಂದ ಕೆಳೆಗಿಳಿದ ಅವರು ಕಾರ್ಯನಿರ್ವಾಹಕೇತರ ನಿರ್ದೇಶಕ/ಅಧ್ಯಕ್ಷರಾಗಿ ಮುಂದುವರಿದರು. 2025ರ ಮಾರ್ಚ್ 25ರಿಂದ ಅಧ್ಯಕ್ಷ ಸ್ಥಾನದಿಂದ ಹೊರಬಂದರು.
ಜಗನ್ನಾಥನ್ ಅವರು ಕಂಪನಿಯ ನಿರ್ದೇಶಕ/ಅಧ್ಯಕ್ಷರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದರು. ಜಗನ್ನಾಥನ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸುತ್ತಿದೆ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.