ನವದೆಹಲಿ: ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಸವಾಲು ಎದುರಾಗಿದ್ದರೂ, ತನ್ನ ದ್ವಿಚಕ್ರ ವಾಹನಗಳಿಗೆ ಆಂತರಿಕ ಮಾರುಕಟ್ಟೆಯಲ್ಲಿ ಮತ್ತು ವಿದೇಶಗಳಲ್ಲಿ ಬೇಡಿಕೆ ಚಿಗುರುತ್ತಿದೆ ಎಂದು ಬಜಾಜ್ ಆಟೊ ಕಂಪನಿ ಹೇಳಿದೆ.
ಆದರೆ, ದ್ವಿಚಕ್ರ ವಾಹನ ಉದ್ಯಮವು ಚೇತರಿಕೆಯ ಹಾದಿಗೆ ಮರಳಿದೆಯೇ ಎಂಬುದರ ಸ್ಪಷ್ಟ ಚಿತ್ರಣ ಆಗಸ್ಟ್ ಅಂತ್ಯದ ವೇಳೆಗೆ ಸಿಗಲಿದೆ ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಸೌಮೆನ್ ರೇ ಹೇಳಿದರು.
‘ಮಾರಾಟದ ಪ್ರಮಾಣದಲ್ಲಿ ತಿಂಗಳಿನಿಂದ ತಿಂಗಳಿಗೆ ಹೆಚ್ಚಳ ಕಾಣುತ್ತಿದ್ದೇವೆ. ಏಪ್ರಿಲ್ನಲ್ಲಿ ವಾಹನಗಳ ಮಾರಾಟವೇ ಇರಲಿಲ್ಲ. ಮೇ ತಿಂಗಳಿಗಿಂತ ಜೂನ್ನಲ್ಲಿ ಸುಧಾರಣೆ ಕಂಡುಬಂತು. ಜೂನ್ಗಿಂತ ಜುಲೈನಲ್ಲಿ ಪರಿಸ್ಥಿತಿ ಸುಧಾರಿಸಿದೆ’ ಎಂದು ಅವರು ಹೇಳಿದರು. ತ್ರಿಚಕ್ರ ವಾಹನ ಮಾರಾಟ ಸುಧಾರಿಸಲು ತುಸು ಕಾಲ ಬೇಕು ಎಂದೂ ಅವರು ಹೇಳದರು.
‘ತ್ರಿಚಕ್ರ ವಾಹನಗಳನ್ನು ಸಾಮಾನ್ಯವಾಗಿ ಸಾಲ ಮಾಡಿ ಖರೀದಿಸಲಾಗುತ್ತದೆ. ಆದರೆ, ವಾಣಿಜ್ಯ ವಹಿವಾಟುಗಳು ಇಲ್ಲದಿದ್ದಾಗ, ಸಾಲ ಮಾಡಲು ಯಾರೂ ಮುಂದೆ ಬರುವುದಿಲ್ಲ. ಲಾಕ್ಡೌನ್ಗಳು ಕೊನೆಗೊಂಡ ನಂತರ ಪ್ರಯಾಣಿಕ ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಚೇತರಿಕೆ ಆಗುತ್ತದೆ’ ಎಂದು ತಿಳಿಸಿದರು.
ಆಗಸ್ಟ್ನಲ್ಲಿ ಪರಿಸ್ಥಿತಿ ಇನ್ನಷ್ಟು ಸುಧಾರಿಸಿದರೆ, ದಸರಾ–ದೀಪಾವಳಿ ಸಂದರ್ಭದಲ್ಲಿ ಬೇಡಿಕೆ ಖಂಡಿತ ಚೆನ್ನಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.