ಮುಂಬೈ (ಪಿಟಿಐ): ‘ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಸದ್ಯ ಎದುರಿಸುತ್ತಿರುವ ವಸೂಲಿಯಾಗದ ಸಾಲದ (ಎನ್ಪಿಎ) ಸಮಸ್ಯೆಗೆ2014ರಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಸರ್ಕಾರ ಮತ್ತು ನಿಯಂತ್ರಣ ಸಂಸ್ಥೆಗಳೇ ಕಾರಣ’ ಎಂದು ಆರ್ಬಿಐನ ಮಾಜಿ ಗವರ್ನರ್ ಉರ್ಜಿತ್ ಪಟೇಲ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಜತೆಗಿನ ಭಿನ್ನಾಭಿಪ್ರಾಯಗಳಿಗಾಗಿ 2018ರ ಡಿಸೆಂಬರ್ 10ರಂದು ರಾಜೀನಾಮೆ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಅವರು ಬಗ್ಗೆಮಾತನಾಡಿದ್ದಾರೆ.
‘ಅತಿಯಾದ ಪ್ರಮಾಣದಲ್ಲಿ ಸಾಲ ನೀಡುವಾಗ ಬ್ಯಾಂಕ್ಗಳು ತಮ್ಮ ಪಾತ್ರವನ್ನು ಸಮರ್ಪಕವಾಗಿ ನಿರ್ವಹಿಸಲಿಲ್ಲ. ನಿಯಂತ್ರಣ ಸಂಸ್ಥೆಗಳೂ ಸಹ ಮುಂಚಿತವಾಗಿಯೇ ಕ್ರಮ ಕೈಗೊಳ್ಳಬೇಕಿತ್ತು' ಎಂದಿದ್ದಾರೆ.
ಸ್ಟ್ಯಾಂಡ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬ್ಯಾಂಕಿಂಗ್ ಉದ್ಯಮದ ಸಮಸ್ಯೆಗಳಿಗೆ ಇರುವ ಪ್ರಮುಖ ಕಾರಣಗಳನ್ನು ನೀಡಿದ್ದಾರೆ.
‘ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ವಸೂಲಾಗದ ಸಾಲ (ಎನ್ಪಿಎ), ಬಂಡವಾಳ ಕೊರತೆಯು ಉದ್ಯಮದ ಬೆಳವಣಿಗೆ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತಿವೆ.
‘2014ರ ನಂತರ ಕೇಂದ್ರದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿತು. ಆರ್ಬಿಐ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ ರಘುರಾಂ ರಾಜನ್, ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಆರ್ಥಿಕ ಸ್ಥಿತಿಗಳ ಪರಿಶೀಲನೆ ಆರಂಭಿಸಿದರು. ಇದರಿಂದಾಗಿ ವ್ಯವಸ್ಥೆಯಲ್ಲಿ ಭಾರಿ ಪ್ರಮಾಣದಲ್ಲಿ ಸುಸ್ತಿ ಸಾಲ ಇರುವುದು ಗಮನಕ್ಕೆ ಬಂದಿತು. ಸಾಲ ವಸೂಲಿಗೆ ದಿವಾಳಿ ಕಾಯ್ದೆ ಪರಿಚಯಿಸಲಾಯಿತು. ಇದರಿಂದಾಗಿ ಆರ್ಥಿಕತೆಗೆ ಅಗತ್ಯವಾದ ನಿಧಿ ನೀಡುವಲ್ಲಿ ಬ್ಯಾಂಕ್ಗಳ ಸಾಮರ್ಥ್ಯ ಗಣನೀಯವಾಗಿ ಇಳಿಕೆ ಕಂಡಿತು. ಇದರಿಂದಾಗಿ ಪ್ರಗತಿಗೆ ಹಿನ್ನಡೆಯಾಯಿತು.
‘ಹಣಕಾಸು ನೀತಿಯ ಮೇಲೆ ಸರ್ಕಾರದ ವಿತ್ತೀಯ ನೀತಿ ಪ್ರಭುತ್ವ ಸಾಧಿಸಿದ ಬಳಿಕ, ಬ್ಯಾಂಕಿಂಗ್ ನಿಯಂತ್ರಣ ವ್ಯವಸ್ಥೆಯ ಮೇಲೆಯೂ ಪ್ರಭಾವ ಬೀರುತ್ತಿರುವುದನ್ನು ನಾವೀಗ ಕಾಣುತ್ತಿದ್ದೇವೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.