ನವದೆಹಲಿ: ಕೇಂದ್ರ ಸರ್ಕಾರವು ಹೊಸ ಆಧಾರ್ ಆ್ಯಪ್ನ ಪರೀಕ್ಷಾ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ಬಳಕೆದಾರರ ಭೌತಿಕ ಕಾರ್ಡ್ ಅಥವಾ ಜೆರಾಕ್ಸ್ ಪ್ರತಿ ಇಲ್ಲದೆಯೇ ಅವರ ಆಧಾರ್ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಪರಿಶೀಲನೆಗೆ ಇದರಿಂದ ಸಹಕಾರಿಯಾಗಲಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ‘ಎಕ್ಸ್’ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ತ್ವರಿತ ದೃಢೀಕರಣ ಮತ್ತು ಸರಳವಾಗಿ ಯುಪಿಐ ವಹಿವಾಟು ನಡೆಸಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಈ ಆ್ಯಪ್ ಕ್ಯೂಆರ್ ಕೋಡ್ ಫೀಚರ್ ಹೊಂದಿದೆ. ತ್ವರಿತವಾಗಿ ಪರಿಶೀಲನೆ ಮತ್ತು ಮುಖಚಹರೆ ದೃಢೀಕರಣ ಮಾಡಲಿದೆ. ಇದರಿಂದ ಆಧಾರ್ನಂತಹ ಭೌತಿಕ ದಾಖಲೆಗಳನ್ನು ಜನರು ತಮ್ಮ ಜೊತೆಗೆ ತೆಗೆದುಕೊಂಡು ಹೋಗುವುದು ತಪ್ಪಲಿದೆ ಎಂದು ತಿಳಿಸಿದ್ದಾರೆ.
ಇದು ಜಾರಿಗೊಂಡ ಬಳಿಕ ಜನರು ಹೋಟೆಲ್, ವಿಮಾನ ನಿಲ್ದಾಣ, ರೈಲಿನಲ್ಲಿ ಟಿಕೆಟ್ ಪರಿಶೀಲನೆ ವೇಳೆ ಗುರುತಿನ ಚೀಟಿ ಕೇಳಿದಾಗ ಆಧಾರ್ನ ಭೌತಿಕ ದಾಖಲೆಗಳನ್ನು ಸಲ್ಲಿಸಬೇಕಿಲ್ಲ. ಆ್ಯಪ್ನಲ್ಲಿ ಕ್ಯೂಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಿದರೆ ಗುರುತು ಲಭ್ಯವಾಗಲಿದೆ. ಬಳಕೆದಾರರು ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿದೆ.
ಆ್ಯಪ್ ಶೇ 100ರಷ್ಟು ಸುರಕ್ಷಿತವಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಬಳಕೆದಾರರ ಪ್ರತಿಕ್ರಿಯೆ ಆಧರಿಸಿ ಇದನ್ನು ಶೀಘ್ರವೇ ಎಲ್ಲರಿಗೂ ಲಭ್ಯವಾಗುವಂತೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.