ಹಣಕಾಸು ಹೂಡಿಕೆ, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ
ನಾನು ಪ್ರಸಾಧನ ತಜ್ಞೆಯಾಗಿ ಕೆಲಸ ಮಾಡುತ್ತಿದ್ದೇನೆ. ನಿಯಮಿತವಾಗಿ ಹಾಗೂ ಕೆಲವೊಮ್ಮೆ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಲು ಸುರಕ್ಷಿತ ಹಾಗೂ ಸ್ವಲ್ಪವಾದರೂ ಹಣದುಬ್ಬರ ಮೀರಿ ಬೆಳೆಯಬಲ್ಲ ಹೂಡಿಕೆ ಕುರಿತ ಉತ್ತಮ ಆಯ್ಕೆ ಬಗ್ಗೆ ತಿಳಿಸಿ – ಕವಿತಾ, ಬೆಳಗಾವಿ
ನಿಮ್ಮ ಹಣವನ್ನು ನಿಯಮಿತವಾಗಿ ಅಥವಾ ಏಕ ಕಂತಿನ ಮೂಲಕ ಹೂಡಿಕೆಗೆ ಯೋಜಿಸುವುದಾದರೆ ಹಾಗೂ ನಿರ್ದಿಷ್ಟವಾಗಿ ಹಣದುಬ್ಬರ ಮಟ್ಟವನ್ನು ಮೀರಿ ಬೆಳೆಯಬಲ್ಲ ಹೂಡಿಕೆಗಳಾಗಬೇಕೆಂದರೆ ಈಕ್ವಿಟಿ, ಚಿನ್ನ ಅಥವಾ ಈಕ್ವಿಟಿ ವಿಭಾಗದ ಹೂಡಿಕೆ ಆಗಿರಬೇಕು. ಉದಾಹರಣೆಗೆ ಈಕ್ವಿಟಿ ಷೇರು, ಚಿನ್ನದ ಬಾಂಡ್ ಅಥವಾ ಫಂಡ್ ಅಥವಾ ಈಕ್ವಿಟಿ ಮ್ಯೂಚುವಲ್ ಫಂಡ್ಗಳಲ್ಲಿನ ಹೂಡಿಕೆಗಳಿಂದ ಮಾತ್ರ ಈ ಗುರಿ ಸಾಧ್ಯ.
ಆದರೆ, ಇವುಗಳ ಸುರಕ್ಷತೆ ಅಲ್ಪಾವಧಿಗಿಂತ ದೀರ್ಘಾವಧಿ ಹೂಡಿಕೆಯಲ್ಲಿ ಹೆಚ್ಚಾಗಿ ಗೋಚರವಾಗುತ್ತದೆ. ಇನ್ನೂ ಹೇಳುವುದಾದರೆ ಮೂರು ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಇಂಡೆಕ್ಸ್ ಫಂಡ್ಗಳೂ ನಿಮಗೆ ಉತ್ತಮ ಆಯ್ಕೆ ಆಗಬಹುದು. ಹೂಡಿಕೆಯ ಮೊದಲು ನಿಮ್ಮ ಆಯ್ಕೆ ಸರಿಯಾದ ಕಂಪನಿ ಅಥವಾ ಉತ್ತಮ ಫಂಡ್ಗಳಲ್ಲಿದೆಯೇ ಎಂಬುದನ್ನು ಪರಾಮರ್ಶಿಸಿ ಮುಂದುವರಿಯಿರಿ.
ನಾನು ಶಿಕ್ಷಕಿಯಾಗಿದ್ದು, ಗ್ರಾಮೀಣ ಭಾಗದಲ್ಲಿ ನೆಲಸಿದ್ದೇನೆ. ಇಬ್ಬರು ಮಕ್ಕಳ ತಾಯಿಯಾಗಿ ಹಾಗೂ ಮನೆಯ ಅಗತ್ಯ ವೆಚ್ಚಗಳನ್ನು ಭರಿಸಿ ಉಳಿದ ಮೊತ್ತವನ್ನು ಉಳಿತಾಯ ಮಾಡುತ್ತಿದ್ದೇನೆ. ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಅವರಲ್ಲಿ ಉಳಿತಾಯದ ಬಗ್ಗೆ ನಾವು ಹೇಗೆ ತಿಳಿವಳಿಕೆ ನೀಡಬಹುದು ಅಥವಾ ಅವರಿಗಾಗಿ ನಾವೇನು ಮಾರ್ಗದರ್ಶನ ಮಾಡಬಹುದು. ಕೆಲವೊಮ್ಮೆ ನಾವು ಕೊಡುವ ಹಣವನ್ನು ದುಂದುವೆಚ್ಚ ಮಾಡದ ರೀತಿ ಅವರಿಗೆ ಯಾವ ರೀತಿ ತಿಳಿ ಹೇಳಬಹುದು ಎಂಬ ಬಗ್ಗೆ ತಿಳಿಸಿ– ರಾಜಶ್ರೀ, ವಿಟ್ಲ, ದಕ್ಷಿಣ ಕನ್ನಡ ಜಿಲ್ಲೆ.
ಇಂದಿನ ದಿನಗಳಲ್ಲಿ ಎಳೆಯ ಮಕ್ಕಳ ಕೈಯಲ್ಲಿ ಅನಿವಾರ್ಯವಾಗಿ ಹಣ ನೀಡಬೇಕಾದ ಪರಿಸ್ಥಿತಿ ಇದ್ದಾಗ ಅದನ್ನು ಸಾರಾಸಗಟಾಗಿ ತಳ್ಳಿಹಾಕುವಂತಿಲ್ಲ. ಇರುವ ವ್ಯವಸ್ಥೆಯಲ್ಲಿ ನಾವು ಅವರಿಗೆ ಸರಿಯಾಗಿ ತಿಳಿವಳಿಕೆ ನೀಡಿ ಹಣವನ್ನು ಅನಿವಾರ್ಯ ಸಂದರ್ಭದಲ್ಲಿ ಉಪಯೋಗಿಸುವುದು ಹಾಗೂ ಅದರ ಮಹತ್ವವನ್ನು ಸೂಕ್ತವಾಗಿ ತಿಳಿಸಿ ಹೇಳಬಹುದು.
ವಿದ್ಯಾರ್ಥಿಗಳು ತಮ್ಮ ಶಾಲೆ ಮತ್ತು ಕಾಲೇಜು ದಿನಗಳಲ್ಲಿ ಹಣಕಾಸು ಯೋಜನೆ ಮತ್ತು ಉಳಿತಾಯ ಅಥವಾ ಹೂಡಿಕೆ ಕುರಿತು ಜಾಗೃತಿ ಹೊಂದಬೇಕಾಗುವುದು ಮುಖ್ಯವಾಗಿದೆ. ಪ್ರಾರಂಭಿಕ ಹಂತದಲ್ಲಿ ಹಣಕಾಸಿನ ರಕ್ಷಣೆ, ಬಡ್ಡಿದರ, ಹೂಡಿಕೆಯ ವಿವಿಧ ಮಾರ್ಗಗಳು, ದೀರ್ಘಾವಧಿಯಲ್ಲಿ ಸಂಚಯವಾಗುವ ಬಡ್ಡಿ ಅಥವಾ ಹೂಡಿಕೆಯ ಸಂಚಿತ ಆದಾಯ ಇತ್ಯಾದಿ ಕುರಿತು ಅವರಿಗೆ ಅರ್ಥ ಮಾಡಿಕೊಡಬೇಕು. ಅವರು ಭವಿಷ್ಯದ ಆರ್ಥಿಕ ನೆಲೆಯಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳಲು ನೆರವಾಗುವ ಮಾಹಿತಿ ನೀಡಬೇಕು.
ಹೂಡಿಕೆ ಮತ್ತು ಹಣಕಾಸು ಜಾಗೃತಿಯು ವಿವಿಧ ಹೂಡಿಕೆಯ ಅವಕಾಶಗಳಾದ ಷೇರು ಮಾರುಕಟ್ಟೆ, ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್), ಬಾಂಡ್, ಮ್ಯೂಚುವಲ್ ಫಂಡ್, ಸ್ಥಿರ ಆಸ್ತಿ ಮತ್ತು ಇತರೆ ಉಳಿತಾಯದ ಅವಶ್ಯಕತೆ ಬಗ್ಗೆ ತಿಳಿಯುವಲ್ಲಿ ಇದು ಅವರಿಗೆ ನೆರವಾಗುತ್ತದೆ. ಇಂತಹ ಜಾಗೃತಿಯು ಯುವಜನರಿಗೆ ಕೇವಲ ಉಳಿತಾಯದ ಮಹತ್ವವನ್ನು ಮಾತ್ರವಲ್ಲ, ಬಡ್ಡಿ ಮತ್ತು ವಿವಿಧ ಬಗೆಯ ಹೂಡಿಕೆಗಳಲ್ಲಿ ಹಣ ಹೂಡುವುದರಿಂದ ಉಂಟಾಗುವ ನಷ್ಟ ಮತ್ತು ಲಾಭ ಎರಡನ್ನೂ ಕಾರಣ ಸಹಿತ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಯುವಜನರಲ್ಲಿ ಶಾಲೆ ಮತ್ತು ಕಾಲೇಜು ದಿನಗಳಲ್ಲಿ ಹೂಡಿಕೆ ಮತ್ತು ಉಳಿತಾಯದ ಅಭ್ಯಾಸವನ್ನು ಬೆಳೆಸುವುದು ಪಾಲಕರ ವಿಶ್ವಾಸ ವೃದ್ಧಿಸುವಂತೆ ಮಾಡುತ್ತದೆ. ಅಲ್ಲದೆ, ತಮ್ಮ ಭವಿಷ್ಯದ ಆರ್ಥಿಕ ಸ್ಥಿರತೆಗೆ ಒಂದು ಆಧಾರವಾಗಬಲ್ಲದು. ಉದಾಹರಣೆಗೆ ಪದೇ ಪದೇ ಮಾಡುವ ಮನೋರಂಜನಾ ವೆಚ್ಚ, ಅರ್ಹತೆ ಹಾಗೂ ಅನಿವಾರ್ಯತೆಗಿಂತ ಅಧಿಕ ಮಟ್ಟದ ವಿಲಾಸಿ ಬದುಕಿನ ವ್ಯಾಮೋಹ, ನಮ್ಮ ಆರ್ಥಿಕ ಕ್ಷಮತೆ ವೃದ್ಧಿಸುವ ಸಾಮರ್ಥ್ಯವನ್ನು ತಡೆಯುತ್ತದೆ. ಈ ಬಗ್ಗೆ ಪಠ್ಯಕ್ರಮವನ್ನು ಮೀರಿದ ನಿತ್ಯದ ಬದುಕಿಗೆ ಬೇಕಾದ ಜ್ಞಾನದ ಹಂಚಿಕೆಯ ಅರಿವು ಮೂಡಿಸುವ ಜವಾಬ್ದಾರಿ ಹಾಗೂ ಅನಿವಾರ್ಯತೆ ಇಂದು ಪೋಷಕರಿಗೂ, ಶಾಲಾ ಕಾಲೇಜುಗಳಿಗೂ ಇದೆ.
ಈ ನಿಟ್ಟಿನಲ್ಲಿ ಕೆಲವು ಪರಿಣಾಮಕಾರಿ ಹೂಡಿಕೆ ಮತ್ತು ಉಳಿತಾಯದ ವಿಧಾನಗಳು ಹೀಗಿವೆ.
ಸರಳ ಉಳಿತಾಯದಿಂದ ಪ್ರಾರಂಭಿಸಿ: ಮಕ್ಕಳಿಗೆ ನಿಮ್ಮ ಒಂದು ‘ಪಿಗ್ಗಿ ಬ್ಯಾಂಕ್’ ಕೊಟ್ಟು ಪ್ರತಿದಿನ ಅದರಲ್ಲಿ ಅವರ ಕೈಯಿಂದ ಹಣ ಉಳಿತಾಯಕ್ಕೆ ಪ್ರೇರಣೆ ನೀಡಿ. ಅದಕ್ಕಾಗಿ ನಾಣ್ಯಗಳನ್ನೋ, ಹೊಸ ನೋಟುಗಳನ್ನೋ ಸಂಗ್ರಹಿಸಿ ಕೊಡಿ. ಸಂಗ್ರಹವಾದ ಮೊತ್ತವನ್ನು ಯಾವುದಾದರೂ ಉತ್ತಮ ಅಗತ್ಯಕ್ಕೆ ಉಪಯೋಗಿಸುವ ಭರವಸೆ ನೀಡಿ ಈಡೇರಿಸಿ.
ಬ್ಯಾಂಕ್ ಖಾತೆ ತೆರೆಯಿರಿ: ಮಕ್ಕಳ ಹೆಸರಲ್ಲಿ, ನಿಮ್ಮ ಸುಪರ್ದಿನಲ್ಲಿ ಬ್ಯಾಂಕ್ ಖಾತೆ ತೆರೆಸಿ. ಅವಕಾಶ ಇದ್ದಾಗ ನಿಮ್ಮೊಂದಿಗೆ ಅವರನ್ನೂ ಬ್ಯಾಂಕ್ಗೆ ಕರೆದುಕೊಂಡು ಹೋಗಿ ವಿವಿಧ ರೀತಿಯ ವ್ಯವಹಾರಗಳ ಬಗ್ಗೆ ತೋರಿಸಿ ತಿಳಿ ಹೇಳಿ. ಇದು ಅವರ ಯೋಚನೆಯಲ್ಲಿ ಹೊಸ ಬದಲಾವಣೆ ತರಬಲ್ಲದು. ಅದೇ ರೀತಿ ಅವರು 18 ವರ್ಷ ತುಂಬುವ ತನಕ ಮಾಹಿತಿ ನೀಡುತ್ತಾ ಮುಂದುವರಿಯಿರಿ, ಮುಂದೆಯೂ ಮಾರ್ಗದರ್ಶನ ನೀಡಿ.
ತುರ್ತು ನಿಧಿ: ತುರ್ತು ನಿಧಿ ನಿರ್ಮಿಸುವುದು ಮನೆಯ ನಿಮ್ಮ ಮಕ್ಕಳಿಗೂ ತಿಳಿದಿರಲಿ. ನಿತ್ಯ ಉಪಯೋಗಕ್ಕಷ್ಟೇ ಅಲ್ಲದೆ ವೇತನದ ಸ್ವಲ್ಪ ಭಾಗವನ್ನು ಉಳಿಸುವುದು ಅನಿರೀಕ್ಷಿತ ಖರ್ಚುಗಳನ್ನು ನಿಭಾಯಿಸಲು ಮತ್ತು ಸಾಲದ ಅವಶ್ಯಕತೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಈ ನಿಧಿಯ ಮಹತ್ವ ಕುರಿತು ಅವರಿಗೆ ತಿಳಿಸಿ. ಉದಾಹರಣೆಗೆ ಅನಿರೀಕ್ಷಿತವಾಗಿ ಬರುವ ಆರೋಗ್ಯ ವೆಚ್ಚ, ಉನ್ನತ ಶಿಕ್ಷಣ, ಹೆಚ್ಚುವರಿ ಲಾಭಕ್ಕಾಗಿನ ಹೂಡಿಕೆ, ಮಕ್ಕಳ ಮದುವೆ ಇತ್ಯಾದಿ ಖರ್ಚಿನ ನಿರ್ವಹಣೆ ಬಗ್ಗೆ ಮಾಹಿತಿ ನೀಡಿ.
ಮಾಸಿಕ ಖರ್ಚು ಆದಾಯ: ದೇಶದ ಬಜೆಟ್ ಇದ್ದಂತೆ ಮನೆಗೊಂದು ಬಜೆಟ್ ಇಟ್ಟುಕೊಳ್ಳುವುದು, ಖರ್ಚು ನಿಯಂತ್ರಿಸಲು ಮತ್ತು ಹೆಚ್ಚುವರಿ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ. ಇದು ಎಲ್ಲರ ಆದಾಯ, ಅನಿವಾರ್ಯದ ಖರ್ಚು ಅಂದಾಜಿಸಿ ಸಂಕಲಿಸಿದ್ದಾಗಿರಲಿ. ಅಗತ್ಯಕ್ಕೆ ತಕ್ಕಂತೆ ಮಕ್ಕಳನ್ನೂ ಇದರಲ್ಲಿ ಭಾಗಿಯಾಗಿಸಿ.
ಹೂಡಿಕೆಗಳು: ನೀವು ಷೇರು, ಮ್ಯೂಚುವಲ್ ಫಂಡ್, ಇನ್ಶೂರೆನ್ಸ್, ಪಿಪಿಎಫ್ ಇತ್ಯಾದಿ ಉತ್ಪನ್ನದ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಮಕ್ಕಳನ್ನೂ ಒಳಗೊಂಡು ಹೂಡಿಕೆ ಮಾಡುವ ಬಗ್ಗೆ ಇರುವ ನಿಮ್ಮ ಅಭಿಪ್ರಾಯವನ್ನು ಮನನ ಮಾಡಿಸಿ. ದೀರ್ಘಾವಧಿಯಲ್ಲಿ ಅದರ ವಾರಸುದಾರರು ಅವರೇ ಆಗಿರುತ್ತಾರೆ. ಅದರೊಡನೆ ಲಾಭ- ನಷ್ಟದ ಪರಿಣಾಮ, ಆರ್ಥಿಕ ವಂಚನೆ, ಅಪಾಯ ಇತ್ಯಾದಿ ಬಗ್ಗೆಯೂ ತಿಳಿಸಿ. ಅದಕ್ಕಾಗಿ ನಮ್ಮೆದುರು ಕಾಣುವ ದೃಷ್ಟಾಂತ ಉದಾಹರಣೆಯನ್ನೇ ಕೊಡಬಹುದು.
ಹಣಕಾಸಿನ ಬಗ್ಗೆ ಜಾಗೃತಿ ಮಾಹಿತಿ: ನಮಗರಿವಿಲ್ಲದ ಅನೇಕ ಮಾಹಿತಿ, ಹಣಕಾಸಿನ ಬಗ್ಗೆ ಇರುವ ಪುಸ್ತಕಗಳ ಮೂಲಕ ಆನ್ಲೈನ್ ತರಗತಿ- ಮಾರ್ಗದರ್ಶನದ ಮೂಲಕ ಪಡೆಯುವಂತೆ ಹಾಗೂ ವಿಶೇಷ ಜ್ಞಾನವನ್ನು ಬೆಳೆಸುವಂತೆ ಅನುಕೂಲ ಮಾಡಿಕೊಡಿ.
ಈ ಎಲ್ಲ ವಿಧಾನಗಳು ಯುವಜನರಿಗೆ ಭವಿಷ್ಯದ ಆರ್ಥಿಕ ಸುಸ್ಥಿರತೆ, ಶಿಸ್ತಿನ ಹೂಡಿಕೆ, ಆರ್ಥಿಕ ಸಂಸ್ಕೃತಿ ರೂಪಿಸುವಲ್ಲಿ ಮತ್ತು ಆರ್ಥಿಕ ಸ್ವಾಯತ್ತತೆ ಸಾಧಿಸಲು ದೀರ್ಘಾವಧಿಯಲ್ಲಿ ನೆರವಾಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.