ADVERTISEMENT

ನವೋದ್ಯಮ ಕುರಿತು ನಿರ್ಮಲಾ ಜೊತೆ ಚರ್ಚೆ: ರಾಜೀವ್

ಕೇಂದ್ರ ಎಲೆಕ್ಟ್ರಾನಿಕ್ಸ್‌, ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 19:19 IST
Last Updated 14 ಮಾರ್ಚ್ 2023, 19:19 IST

ನವದೆಹಲಿ: ಅಮೆರಿಕದ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ (ಎಸ್‌ವಿಬಿ) ದಿವಾಳಿಯಾಗಿರುವ ಹಿನ್ನೆಲೆಯಲ್ಲಿ, ಭಾರತದ ನವೋದ್ಯಮ ವಲಯದ ಸಮಸ್ಯೆಗಳ ಕುರಿತು ಕೇಂದ್ರ ಹಣಕಾಸು ಸಚಿವಾಲಯದ ಜೊತೆ ಚರ್ಚಿಸುವುದಾಗಿ ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ನವೋದ್ಯಮಗಳ ಪ್ರತಿನಿಧಿಗಳ ಜೊತೆ ಮಂಗಳವಾರ ಆನ್‌ಲೈನ್‌ ಮೂಲಕ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಜೀವ್, ‘ಎಸ್‌ವಿಬಿ ದಿವಾಳಿಯಾಗಿರುವುದರಿಂದ ತೊಂದರೆಗೆ ಸಿಲುಕಿರುವ ನವೋದ್ಯಮಗಳ ಬಗ್ಗೆ ಹಣಕಾಸು ಸಚಿವಾಲಯದ ಜೊತೆ ಚರ್ಚಿಸಲಾಗುವುದು. ಅವುಗಳು ತಕ್ಷಣಕ್ಕೆ ಎದುರಿಸುತ್ತಿರುವ ನಗದು ಲಭ್ಯತೆಯ ಸಮಸ್ಯೆಯನ್ನು ಬಗೆಹರಿಸುವ ವಿಚಾರವಾಗಿ ಮಾತುಕತೆ ನಡೆಸುವೆ’ ಎಂದಿದ್ದಾರೆ.

‘ನವೋದ್ಯಮ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ ಹಾಗೂ ನೀಡಿರುವ ಸಲಹೆಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೆ ತರುತ್ತೇನೆ. ನವೋದ್ಯಮಗಳು ಅಮೆರಿಕದ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಠೇವಣಿ ಮೊತ್ತವನ್ನು ಐಎಫ್ಎಸ್‌ಸಿ ಕೇಂದ್ರಿತ ಬ್ಯಾಂಕ್‌ಗಳಿಗೆ ಅಥವಾ ಅಮೆರಿಕದಲ್ಲಿರುವ ಭಾರತದ ಬ್ಯಾಂಕ್‌ಗಳಿಗೆ ವರ್ಗಾವಣೆ ಮಾಡುವುದಕ್ಕೆ ಇರುವ ಸುಲಭ ಮಾರ್ಗಗಳನ್ನು ಕಂಡುಕೊಳ್ಳುವುದಕ್ಕೂ ಪ್ರಯತ್ನಿಸಲಾಗುತ್ತದೆ’ ಎಂದು ಹೇಳಿದ್ದಾರೆ.

ADVERTISEMENT

ಝೋತ್‌ ಡಾಟ್‌ ಐಒ, ಹಾಟಿಕಾ.ಐಒ ಸೇರಿದಂತೆ 450ಕ್ಕೂ ಅಧಿಕ ನವೋದ್ಯಮಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.