ಮುಂಬೈ: ದೇಶದ ಷೇರುಪೇಟೆಗಳು ಆರಂಭದಲ್ಲಿ ಕಂಡಿದ್ದ ಗಳಿಕೆಯನ್ನು ವಹಿವಾಟಿನ ಅಂತ್ಯದವರೆಗೂ ಕಾಯ್ದುಕೊಳ್ಳಲು ವಿಫಲವಾಗಿವೆ. ಹೂಡಿಕೆದಾರರು ಲಾಭಗಳಿಕೆಗೆ ಮುಂದಾಗಿದ್ದರಿಂದ ಅಲ್ಪ ಏರಿಕೆಯನ್ನಷ್ಟೇ ಕಂಡಿವೆ.
ಮುಂಬೈ ಷೇರುಪೇಟೆ (ಬಿಎಸ್ಇ) ಸಂವೇದಿ ಸೂಚ್ಯಂಕವು ಆರಂಭದಲ್ಲಿ 640 ಅಂಶಗಳಷ್ಟು ಏರಿಕೆ ಕಂಡಿತ್ತು. ಆದರೆ ದಿನದಂತ್ಯಕ್ಕೆ 83 ಅಂಶಗಳ ಅಲ್ಪ ಏರಿಕೆಯೊಂದಿಗೆ 34,370 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.
ರಾಷ್ಟ್ರೀಯ ಷೇರುಪೇಟೆ (ಎನ್ಎಸ್ಇ) ಸೂಚ್ಯಂಕ ನಿಫ್ಟಿ 25 ಅಂಶ ಹೆಚ್ಚಾಗಿ 10,167 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.
ಇಂಡಸ್ಇಂಡ್ ಬ್ಯಾಂಕ್ ಷೇರು ಶೇ 7ರಷ್ಟು ಗರಿಷ್ಠ ಏರಿಕೆ ಕಂಡಿತು.
ಆರ್ಐಎಲ್ ಷೇರು ಗಳಿಕೆ: ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯು ಭಾನುವಾರ ಜಿಯೊ ಫ್ಲಾಟ್ಫಾರ್ಮ್ಸ್ನ ಶೇ 1.16ರಷ್ಟು ಷೇರುಗಳನ್ನು ಅಬುಧಾಬಿ ಇನ್ವೆಸ್ಟ್ಮೆಂಟ್ ಅಥಾರಿಟಿಗೆ ಮಾರಾಟ ಮಾಡಿರುವುದರಿಂದ ಸೋಮವಾರ ಷೇರಿನ ಬೆಲೆ ಶೇ 3ರವರೆಗೂ ಏರಿಕೆ ಕಂಡಿತ್ತು. ಆದರೆ ಕೊನೆಗೆ ಆ ಏರಿಕೆಯು ಶೇ 0.51ಕ್ಕೆ ಸೀಮಿತಗೊಂಡಿತು.
ತೈಲ ಉತ್ಪಾದನೆ ಕಡಿತ ಒಪ್ಪಂದವನ್ನು ಜುಲೈ ಅಂತ್ಯದವರೆಗೂ ವಿಸ್ತರಿಸಲು ಒಪೆಕ್ ಮತ್ತು ರಷ್ಯಾ ಒಪ್ಪಿಗೆ ನೀಡಿವೆ. ಇದು ಸೋಮವಾರ ಷೇರುಪೇಟೆಯು ಸಕಾರಾತ್ಮಕವಾಗಿ ವಹಿವಾಟು ಆರಂಭವಾಗುವಂತೆ ಮಾಡಿತು. ಮಧ್ಯಾಹ್ನದ ಬಳಿಕ ಹೂಡಿಕೆದಾರರು ಲಾಭ ಮಾಡಿಕೊಳ್ಳಲು ಮುಂದಾದರು. ಹೀಗಾಗಿ ಸೂಚ್ಯಂಕಗಳು ಇಳಿಕೆ ಕಂಡವು ಎಂದು ಆನಂದ್ ರಥಿ ಕಂಪನಿಯ ಮುಖ್ಯಸ್ಥ ನರೇಂದ್ರ ಸೋಲಂಕಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.