ADVERTISEMENT

ಮಂಕುತಿಮ್ಮನ ಕಗ್ಗ | ಬಾಳಿನ ಸುಗಂಧ

ಡಾ. ಗುರುರಾಜ ಕರಜಗಿ
Published 25 ಮೇ 2020, 19:30 IST
Last Updated 25 ಮೇ 2020, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಉಪ್ಪಿಟ್ಟು ಹುಳಿಯಿಷ್ಟು ಕಾರ ಸಿಹಿಯಷ್ಟಿಟ್ಟು |

ಒಪ್ಪಿರ್ದೊಡದು ಭೋಜ್ಯವಂತು ಜೀವಿತಮುಂ ||
ತಪ್ಪು ಸರಿ ಬೆಪ್ಪು ಜಾಣಂದಕುಂದುಗಳ ಬಗೆ |
ಯಿಪ್ಪತ್ತು ಸೇರೆ ರುಚಿ – ಮಂಕುತಿಮ್ಮ || 294 ||

ಪದ-ಅರ್ಥ: ಉಪ್ಪಿಷ್ಟು=ಉಪ್ಪು+ಇಷ್ಟು, ಸಿಹಿಯಷ್ಟಿಷ್ಟು=ಸಿಹಿ+ಅಷ್ಟಿಟ್ಟು, ಒಪ್ಪಿರ್ದೊಡದು=ಒಪ್ಪಿದೊಡೆ+ಅದು, ಭೋಜ್ಯವಂತು=
ಭೋಜ್ಯ+ಅಂತು, ಜಾಣಂದಕುಂದುಗಳ=
ಜಾಣ+ಅಂದ+ಕುಂದುಗಳ

ADVERTISEMENT

ವಾಚ್ಯಾರ್ಥ: ಉಪ್ಪು, ಹುಳಿ, ಕಾರ, ಸಿಹಿ ಇಷ್ಟಿಷ್ಟು ಸರಿಯಾಗಿ ಒಪ್ಪಿಗೆಯಾದರೆ ಅದು ಊಟ ಮಾಡಲು ಅರ್ಹವಾದದ್ದು. ಅಂತೆಯೇ ಬದುಕು. ತಪ್ಪು, ಸರಿ, ಮೂರ್ಖತನ, ಜಾಣತನ, ಸೊಗಸು, ಕೊರತೆಗಳಂತಹ ಇಪ್ಪತ್ತು ಬಗೆಗಳು ಸೇರಿದಾಗ ಬದುಕಿಗೊಂದು ರುಚಿ.

ವಿವರಣೆ: ನಾವು ಉಣ್ಣುವ ಊಟ ಚೆನ್ನಾಗಿರಬೇಕೆಂದರೆ ಅದರಲ್ಲಿ ಬಳಸಿದ ಉಪ್ಪು, ಹುಳಿ, ಕಾರ, ಸಿಹಿ ಎಲ್ಲವೂ ಸರಿಯಾದ ಪ್ರಮಾಣದಲ್ಲಿರಬೇಕು. ನಮಗೆ ಸಿಹಿ ಇಷ್ಟ ಎಂದು ಬರೀ ಸಕ್ಕರೆ ಅಥವಾ ಬೆಲ್ಲವನ್ನು ತಿನ್ನಲಾದೀತೆ? ಒಂದು ರಾಶಿ ಹಲ್ವ ಅಥವಾ ಐವತ್ತು ಗುಲಾಬ್ ಜಾಮೂನ್‌ನನ್ನು ಒಂದೇ ಸಮನೆ ತಿನ್ನುವುದು ಅಸಾಧ್ಯ. ನಡು ನಡುವೆ ಸ್ವಲ್ಪ ಕಾರದ ಚಟ್ನಿಯನ್ನೋ ಉಪ್ಪಿನಕಾಯಿಯನ್ನೋ ಬಾಡಿಸಿಕೊಂಡರೆ, ಸಿಹಿಯ ರುಚಿ ಹೆಚ್ಚುತ್ತದೆ. ಅದರಂತೆಯೇ ಕಾರದ ತಿನಿಸು ಇಷ್ಟವೆಂದು ಒಂದು ಕಿಲೋ ಹಸಿ ಮೆಣಸಿನಕಾಯಿ ತಿನ್ನುವುದು ಅಪಾಯಕಾರಿ. ಎಲ್ಲ ರುಚಿಗಳೂ ಒಂದು ಹದದಲ್ಲಿದ್ದರೆ ಊಟ ಸೌಖ್ಯವಾಗುತ್ತದೆ.

ಇದರಂತೆಯೇ ಬದುಕೂ ಕೂಡ. ಅದರಲ್ಲೂ ಅನೇಕ ಗುಣಗಳು ಸೇರ್ಪಡೆಯಾಗಿ ಬದುಕಿಗೊಂದು ಸೊಗವನ್ನು ಕೊಡುತ್ತವೆ. ಬದುಕಿನಲ್ಲಿ ಎಲ್ಲವೂ ಸರಿಯಾಗಿಯೇ ಇರುವುದು ಸಾಧ್ಯವಿಲ್ಲ. ತಪ್ಪುಗಳು ಆಗಿಯೇ ತೀರುತ್ತವೆ. ಅವು ಬದುಕನ್ನು ಕುಗ್ಗಿಸುವುದಿಲ್ಲ, ಬದಲಾಗಿ ಹೊಸ ತಿಳಿವನ್ನು ಮೂಡಿಸಿ ಶ್ರೀಮಂತಗೊಳಿಸುತ್ತವೆ. ದೊಡ್ಡವರ ಬದುಕಿನಲ್ಲೂ ಕಂಡುಬರುವ ಚಿಕ್ಕಪುಟ್ಟ ವಿಚಿತ್ರ ನಡವಳಿಕೆಗಳು, ಸಂತೋಷವನ್ನು ಉಕ್ಕಿಸುತ್ತವೆ. ಅವು ನಮಗೆ ಕುಂದು ಎನ್ನಿಸಬಹುದು, ಕೆಲವೊಂದು ನಡವಳಿಕೆಗಳು ಮೂಢನಂಬಿಕೆ ಅಥವಾ ವಿಚಿತ್ರ ಎನ್ನಿಸಬಹುದು. ಆದರೆ ಅವೆಲ್ಲ ಬದುಕಿನ ಅಲಂಕಾರಗಳಂತೆ, ಆ ವ್ಯಕ್ತಿಗಳ ಬಗ್ಗೆ ಒಂದು ರೀತಿಯ ಅಭಿಮಾನವನ್ನು ಹುಟ್ಟಿಸುತ್ತವೆ, ಕುತೂಹಲವನ್ನುಂಟು ಮಾಡುತ್ತವೆ. ಅಂತಹ ದೊಡ್ಡ ವ್ಯಕ್ತಿಗಳೂ ಹೀಗೆ ಮಾಡುತ್ತಾರಲ್ಲ ಎಂದು ಬೆರಗಾಗುತ್ತದೆ. ನಮ್ಮ ಪ್ರಧಾನಿ ಮೋದಿಯವರಿಗೆ ಮಕ್ಕಳನ್ನು ಕಂಡೊಡನೆ ಅವರ ಕಿವಿಯನ್ನು ಹಿಡಿದೆಳೆದು ಸಂಭ್ರಮಿಸುವ ಹವ್ಯಾಸವಿದೆಯಂತೆ. ಅಮೆರಿಕದ ಅಧ್ಯಕ್ಷ ರೇಗನ್ ಕೂಡ ಹಾಗೆಯೇ ಮಾಡುತ್ತಿದ್ದರಂತೆ. ಬಿಲ್‌ಗೇಟ್ಸ್‌ ತನ್ನ ಕಂಪನಿ ಪ್ರಾರಂಭ ಮಾಡಿದ ಕೆಲವು ವರ್ಷಗಳವರೆಗೆ ತನ್ನಲ್ಲಿ ಕೆಲಸ ಮಾಡುವ ಎಲ್ಲರ ಕಾರಿನ ನಂಬರುಗಳನ್ನು ನೆನಪಿನಲ್ಲಿಡುತ್ತಿದ್ದರಂತೆ. ಸಚಿನ್ ತೆಂಡೂಲ್ಕರ್ ಮೈದಾನದಲ್ಲಿ ಯಾವಾಗಲೂ ಬಲಗಾಲನ್ನೇ ಮೊದಲು ಇಟ್ಟು ಹೋಗುತ್ತಿದ್ದರು ಮತ್ತು ಶತಕ ಬಾರಿಸುವವರೆಗೆ ಹೆಲ್ಮೆಟ್ ತೆಗೆಯುತ್ತಿರಲಿಲ್ಲ. ನಮ್ಮ ಡಿ.ವಿ.ಜಿ ಸಾಹಿತ್ಯವನ್ನು, ಸಮಾಜವನ್ನು, ಸಂಗೀತವನ್ನು ಎಷ್ಟು ಪ್ರೀತಿಸಿದರೋ ಅಷ್ಟೇ ಭೋಜನವನ್ನು ಪ್ರೀತಿಸಿದರು. ಅವರು ತಿಂಡಿಪೋತರ ಸಂಘದ ನಾಯಕರೂ ಆಗಿದ್ದರು. ಕಣ್ಣು ಉರಿಯುತ್ತವೆ ಎಂದಾಗ ಯಾರೋ ಹೇಳಿದರೆಂದು ತಮ್ಮ ಕನ್ನಡಕವನ್ನು ರಾತ್ರಿ ಮಲಗುವಾಗ ತಾಮ್ರದ ತಂಬಿಗೆಯ ನೀರಿನಲ್ಲಿ ಮುಳುಗಿಸಿ ಇಟ್ಟಿದ್ದರಂತೆ! ನ್ಯೂಟನ್ ತನ್ನ ಮನೆಯ ಬೆಕ್ಕಿಗೆ ಮತ್ತು ಮರಿಗೆ ಒಳಗೆ ಬರಲು ಅನುವಾಗುವಂತೆ ಬಾಗಿಲಿಗೆ ಒಂದು ದೊಡ್ಡ ಮತ್ತು ಒಂದು ಸಣ್ಣ ಕಿಂಡಿ ಕೊರೆಸಿದ್ದನಂತೆ!

ಈ ಎಲ್ಲ ಸುಂದರ, ಕೆಲವೊಮ್ಮೆ ವಿಚಿತ್ರ ಎನ್ನಿಸುವ ಗುಣಗಳಿಂದಲೇ ಬಾಳಿಗೊಂದು ವಿಶೇಷ ರುಚಿ, ಸುಗಂಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.