ಮೈಸೂರು: ದಸರೆಗಾಗಿ ಮೈಸೂರಿನಲ್ಲಿ 45 ದಿನಗಳ ಕಾಲ ಬೀಡು ಬಿಟ್ಟಿದ್ದ ಆನೆಗಳು ಭಾನವಾರ ಬೆಳಿಗ್ಗೆ ಕಾಡಿನತ್ತ ಮುಖ ಮಾಡಿದವು. 12 ಆನೆಗಳ ಪೈಕಿ 9 ಆನೆಗಳು ಲಾರಿ ಹತ್ತಿ ಶಿಬಿರಗಳತ್ತ ಹೊರಟವು.
ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಿ, ಕಬ್ಬು, ಬೆಲ್ಲ, ವಿವಿಧ ಫಲ ನೀಡಿದರು. ಬಳಿಕ ಮಾವುತರು, ಕಾವಾಡಿಗಳು ಮತ್ತು ಕುಟುಂಬದವರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಡಳಿತ ವತಿಯಿಂದ ಮಾವುತರು, ಕವಾಡಿಗರಿಗೆ ವಸ್ತ್ರ ಹಾಗೂ ತಲಾ ₹ 8,500 ಗೌರವಧನ ನೀಡಿ ಸಾಂಪ್ರದಾಯಿಕವಾಗಿ ಬೀಳ್ಕೊಡಲಾಯಿತು.
12 ಆನೆಗಳ ಪೈಕಿ ಮೂರು ಆನೆಗಳು ಸೋಮವಾರ ಸಂಜೆ ಕಾಡಿಗೆ ಹೊರಡಲಿವೆ. 9 ಆನೆಗಳು ಕಾಡಿನತ್ತ ಪಯಣ ಆರಂಭಿಸಿದರೆ ಅರಮನೆಯ 6 ಹೆಣ್ಣಾನೆಗಳು ಬೇಸರದ ಮುಖ ಮಾಡಿದ್ದವು.
ಸಚಿವ ಸಾ.ರಾ.ಮಹೇಶ್ ಮಾತನಾಡಿ, ‘ಜಿಲ್ಲಾಡಳಿತ ಹಾಗೂ ಸರ್ಕಾರದಿಂದ ಸಕಲ ಗೌರವದೊಂದಿಗೆ ಗಜಪಡೆಯನ್ನು ಕಳುಹಿಸಿಕೊಡುತ್ತಿದ್ದೇವೆ. ಎಲ್ಲರ ಸಹಕಾರದಿಂದ ದಸರಾ ಯಶಸ್ವಿಯಾಗಿ ನಡೆದಿದೆ. ಜತೆಗೆ, ವಿಮಾನ ಹಾರಾಟ ಅವಧಿಯನ್ನು ಜನರ ಬೇಡಿಕೆಗೆ ಅನುಸಾರವಾಗಿ ವಿಸ್ತರಿಸಲಾಗುವುದು. ದೀಪಾಲಂಕಾರವನ್ನು ಇನ್ನೂ 2 ದಿನ ವಿಸ್ತರಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಆನೆ ವೈದ್ಯ ನಾಗರಾಜು, ಡಿಸಿಎಫ್ ಸಿದ್ದರಾಮಪ್ಪ ಚಳ್ಕಾಪುರೆ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.