ಮೈಸೂರಿನ ಅರಮನೆ ಆವರಣದಲ್ಲಿ ಶುಕ್ರವಾರ ‘ಕುಶಾಲತೋಪು’ ಸಿಡಿಸುವ ಫಿರಂಗಿಗಳಿಗೆ ಪೂಜೆ ಸಲ್ಲಿಸಿದ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಗಾಡಿಯನ್ನು ಎಳೆದರು. ಡಿಸಿಪಿಗಳಾದ ಆರ್.ಎನ್.ಬಿಂದುಮಣಿ, ಕೆ.ಎಸ್.ಸುಂದರ್ರಾಜ್, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ನೆರವಾದರು
–ಪ್ರಜಾವಾಣಿ ಚಿತ್ರ
ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಅರಮನೆ ಆವರಣದಲ್ಲಿ ಶುಕ್ರವಾರ ‘ಕುಶಾಲತೋಪು’ ಸಿಡಿಸುವ ಫಿರಂಗಿ ಗಾಡಿಗಳನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಲಾಯಿತು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ 7 ಫಿರಂಗಿಗಳಿಗೆ ಪೂಜೆ ಸಲ್ಲಿಸಿದರು. ಡಿಸಿಪಿಗಳಾದ ಆರ್.ಎನ್.ಬಿಂದುಮಣಿ, ಕೆ.ಎಸ್.ಸುಂದರ್ರಾಜ್ ಪಾಲ್ಗೊಂಡಿದ್ದರು.
ಅರಮನೆ ಅರ್ಚಕ ಪ್ರಹ್ಲಾದರಾವ್ ನೇತೃತ್ವದಲ್ಲಿ ನಡೆದ ಧಾರ್ಮಿಕ ಕಾರ್ಯದಲ್ಲಿ ಮೊದಲಿಗೆ ಕುಶಾಲ ತೋಪು ಸಿಡಿಸುವಾಗ ಯಾವುದೇ ಅವಘಡವಾಗದಂತೆ ವಿಘ್ನ ನಿವಾರಕ ಗಣಪತಿಗೆ ಪೂಜೆ ಸಲ್ಲಿಸಲಾಯಿತು. ನಂತರ ಚಾಮುಂಡೇಶ್ವರಿ ದೇವತೆ ಸ್ಮರಿಸಲಾಯಿತು.
ಮೃತ್ಯುಂಜಯ ಪೂಜೆ ಸಲ್ಲಿಸಿ 9 ಬಾರಿ ಮಂತ್ರಗಳನ್ನು ಆಯುಕ್ತರಿಂದ ಹೇಳಿಸಿ ಮಂಗಳಾರತಿ ಮಾಡಿಸಲಾಯಿತು.
ಜಂಬೂಸವಾರಿ ದಿನದಂದು ಅಂಬಾರಿಯಲ್ಲಿರುವ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವಾಗ, 52 ಸೆಕೆಂಡ್ನಲ್ಲಿ 21 ಕುಶಾಲ ತೋಪು ಸಿಡಿಸುವುದು ಸಂಪ್ರದಾಯ. ಅದಕ್ಕಾಗಿ ಪೂರ್ವಭಾವಿಯಾಗಿ ಆನೆಗಳು ಹಾಗೂ ಕುದುರೆಗಳು ಶಬ್ದಕ್ಕೆ ಬೆಚ್ಚದಂತೆ ಮಾಡಲು ಪೂರ್ವಾಭ್ಯಾಸ ನೀಡಲಾಗುತ್ತದೆ.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ‘ಜಂಬೂಸವಾರಿ ಮೆರವಣಿಗೆ ದಿನದಂದು ಅರಮನೆ ಹಾಗೂ ಪಂಜಿನ ಕವಾಯತು ಮೈದಾನದಲ್ಲಿ 21 ಸುತ್ತು ಕುಶಾಲತೋಪು ಸಿಡಿಸಲಾಗುತ್ತದೆ. ಸಿಬ್ಬಂದಿಯು ಅದಕ್ಕಾಗಿ ಅಭ್ಯಾಸ ನಡೆಸಲು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಗಿದೆ’ ಎಂದರು.
‘ಕುಶಾಲು ತೋಪು ತಾಲೀಮಿನಲ್ಲಿ ನಗರ ಸಶಸ್ತ್ರ ಮೀಸಲು ಪಡೆಯ 35ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಲಿದ್ದು, ಪೂರ್ವಾಭ್ಯಾಸ ನಡೆಯಲಿದೆ. ಪಾಲ್ಗೊಳ್ಳುವ ಸಿಬ್ಬಂದಿಗೆ ವಿಮೆ ಮಾಡಿಸಲಾಗಿದೆ’ ಎಂದು ತಿಳಿಸಿದರು.
ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಡಿಸಿಎಫ್ ಐ.ಬಿ.ಪ್ರಭುಗೌಡ ಪಾಲ್ಗೊಂಡಿದ್ದರು.
ಭಾರ ಹೊತ್ತ ‘ಮಹೇಂದ್ರ’:
ಭವಿಷ್ಯದ ಅಂಬಾರಿ ಆನೆ ‘ಮಹೇಂದ್ರ’ಗೆ ಶುಕ್ರವಾರ ಮರದ ಅಂಬಾರಿ ಹೊರಿಸುವ ತಾಲೀಮು ನಡೆಯಿತು. ಅವನ ಹಿಂದೆಯೇ ಇದ್ದ ‘ಕ್ಯಾಪ್ಟನ್’ ಅಭಿಮನ್ಯು ವಾರಸುದಾರಗೆ ಆತ್ಮವಿಶ್ವಾಸ ತುಂಬುತ್ತಿದ್ದಾನೆ ಎಂಬಂತೆ ಆನೆಪ್ರಿಯರಿಗೆ ಭಾಸವಾಯಿತು. ಕುಮ್ಕಿ ಆನೆಗಳಾಗಿ ‘ಕಾವೇರಿ’ ಹಾಗೂ ‘ಲಕ್ಷ್ಮಿ’ ಹೆಜ್ಜೆ ಹಾಕಿ ‘ಮಹೇಂದ್ರ’ನಿಗೆ ಸಾಥ್ ನೀಡಿದರು. ಸುಮಾರು 300 ಕೆ.ಜಿ. ಮರಳಿನ ಮೂಟೆಗಳೂ ಸೇರಿದಂತೆ 500 ಕೆ.ಜಿ ಭಾರ ಹೊತ್ತ ‘ಮಹೇಂದ್ರ’ ಯಾವುದೇ ಅಳುಕಿಲ್ಲದೇ ರಾಜಗಾಂಭೀರ್ಯದಲ್ಲಿ ಜಂಬೂಸವಾರಿ ಮಾರ್ಗದಲ್ಲಿ ಸಾಗಿದನು. ‘ಅಭಿಮನ್ಯು’ ‘ಹೇಮಾವತಿ’ಯನ್ನು ‘ಭೀಮ’ ‘ಏಕಲವ್ಯ’ ‘ಸುಗ್ರೀವ’ ‘ಮಹೇಂದ್ರ’ ‘ಪ್ರಶಾಂತ’ ‘ಕಾವೇರಿ’ ‘ಕಂಜನ್’ ‘ರೂಪ’ ಶ್ರೀಕಂಠ’ ಹಾಗೂ ‘ಧನಂಜಯ’ ಆನೆಗಳು ಅನುಸರಿಸಿದವು. ಬೆಳಿಗ್ಗೆ 7.31ಕ್ಕೆ ಹೊರಟು ಬನ್ನಿಮಂಟಪಕ್ಕೆ ತಲುಪಿ 10.53ಕ್ಕೆ ಅರಮನೆಗೆ ವಾಪಸಾದನು. 3ಗಂಟೆ 21 ನಿಮಿಷದಲ್ಲಿ ವಾಪಸಾದನು. ತಾಲೀಮಿನ ವೇಳೆ ಡಿಸಿಎಫ್ ಐ.ಬಿ.ಪ್ರಭುಗೌಡ ಸಿಬ್ಬಂದಿ ಅಕ್ರಂ ರಂಗರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.