ADVERTISEMENT

ಶರಣರ ದೃಷ್ಠಿಯಲ್ಲಿ ಕಾಗೆ ‘ದಾಸೋಹ ಪಕ್ಷಿ’

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 14:50 IST
Last Updated 9 ಆಗಸ್ಟ್ 2022, 14:50 IST
ಮಹಾಂತ ಸ್ವಾಮೀಜಿ ಮುದಗಲ್ 
ಮಹಾಂತ ಸ್ವಾಮೀಜಿ ಮುದಗಲ್    

ಈ ಪ್ರಪಂಚದಲ್ಲಿ ದಿನ ಬೆಳಗಾದರೆ ಕಾಗೆ, ಕೋಳಿಗಳ ಧ್ವನಿಯನ್ನು ಕೇಳಿಯೇ ಏಳುವ ನಾವು, ಅದನ್ನು ಕನಿಷ್ಠ ಎಂದು ತಿಳಿದು ಅದರ ಒಳ್ಳೆಯ ಗುಣವನ್ನು ಲೆಕ್ಕಿಸುವುದೇ ಇಲ್ಲ. ಅಂತಹ ಸೂಕ್ಷ್ಮತೆಗಳನ್ನು ಮಾನವನಾದಿಯಾಗಿ, ಸಕಲ ಜೀವಿಗಳಲ್ಲಿ ಗುರುತಿಸಿ, ಸಕಲ ಜೀವಾತ್ಮರಿಗೆ ಲೇಸಬಯಸಿದವರೇ ಕಲ್ಯಾಣದ ಶರಣರು.

ಮನುಕುಲಕ್ಕೆ ಉಪಕಾರಿಯಾದ ಕೆಲ ಜೀವಿಗಳನ್ನು ಅಪವಿತ್ರವಾದವುಗಳು ಎಂದು ಸಾಮಾನ್ಯ ಜನರ ಮನದಲ್ಲಿ ತಪ್ಪು ಕಲ್ಪನೆಗಳು ಬೇರೂರುವಂತೆ ಮಾಡಿದ್ದರು. ಅಂತಹ ಜೀವಿಗಳಲ್ಲಿ ‘ಕಾಗೆ’ಯೂ ಒಂದು. ಅದನ್ನು ಚಾಂಡಾಲ ಪಕ್ಷಿ ಎಂದರು. ಆದರೆ, ಶರಣರು ಅದನ್ನು ಸ್ಪಷ್ಟವಾಗಿ ಅಲ್ಲಗಳೆದು, ‘ಕಾಗೆ ದಾಸೋಹ ಪಕ್ಷಿ’ ಎಂದರು. ಅದರ ಪರೋಪಕಾರದ ಗುಣವನ್ನು ಪರಿಚಯಿಸಿದರು. ಅದು ಎಂತಹ ಪರೋಪಕಾರಿ ಪಕ್ಷಿಯಾಗಿದೆ ಎಂದರೆ, ಮಾನವ ಕಾಗೆ, ಕೋಳಿಗಳಿಗಿಂತಲೂ ಕೀಳು ಎನ್ನುವುದನ್ನು ಹೀಗೆ ಹೇಳುತ್ತಾರೆ.

‘ಕಾಗೆಯಂದಗುಳ ಕಂಡರೆ ಕರೆಯದೆ ತನ್ನ ಕುಲವೆಲ್ಲವ, ಕೋಳಿ ಒಂದು ಗುಟುಕು ಕಂಡರೆ, ಕರೆಯದೆ ತನ್ನ ಬಳಗವೆಲ್ಲವ, ಮಾನವ ಭಕ್ತಿ ಪಕ್ಷವಿಲ್ಲದಿದ್ದಡೆ ಕಾಗೆ ಕೋಳಿಗಳಿಗಿಂತ ಕರಕಷ್ಟ ಕೂಡಲಸಂಗಮದೇವಾ’ ಎಂದು ಕಾಗೆ ಕೋಳಿಗಳಲ್ಲಿರವ ಕರೆದುಕೊಂಡು ಉಣ್ಣುವ ಶ್ರೇಷ್ಠ ಗುಣ, ಪ್ರಜ್ಞಾವಂತರಾದ ಮನುಷ್ಯರಲ್ಲಿ ಇಲ್ಲದಿರುವ ದಾಸೋಹ ಭಾವ, ಹಂಚಿಕೊಂಡು ತಿನ್ನುವ ಗುಣವನ್ನು ಎತ್ತಿ ತೋರಿಸಿದರು.

ADVERTISEMENT

ಬಸವಾದಿ ಶರಣರು ಕಾಯಕ ಮತ್ತು ದಾಸೋಹಕ್ಕೆ ಬಹು ದೊಡ್ಡ ಪ್ರಾಧಾನ್ಯತೆ ನೀಡಿದ್ದರು. ಅದು ಅಲ್ಲಿನ ಪ್ರತಿಯೊಬ್ಬ ಶರಣರ ಮೂಲಮಂತ್ರವಾಗಿತ್ತು. ಅದಕ್ಕಾಗಿಯೇ ಅವರು ‘ಸೋಹಂ ಎಂದೆನಿಸದೆ, ದಾಸೋಹಂ ಎಂದೆನಿಸಯ್ಯ’ ಎಂದರು.

ಈ ಉಂಡು, ಉಣಿಸುವ ಶರಣರ ಸರಳ ತತ್ವವೇ ನಾಡಿನ ಮೂಲೆ ಮೂಲೆಯಿಂದ ಸ್ತ್ರೀ ಪುರುಷರು ಬಸವಣ್ಣನವರ ಕಲ್ಯಾಣದ ಕಡೆಗೆ ದಾವಿಸಿ ಬಂದು ಆ ತತ್ವಗಳನ್ನು ಪಾಲಿಸಿ ಶರಣರಾದರು.

ಸಂಗ್ರಹ: ಎಂ.ಬಿ.ಕಟ್ಟಿಮನಿ

(ವಿಜಯಪುರದ ಶ್ರೀ ತೋಂಟದಾರ್ಯ ಅನುಭವ ಮಂಟಪದಲ್ಲಿ ನಡೆಯುತ್ತಿರುವ ಶ್ರಾವಣಮಾಸದ ಪ್ರವಚನಸಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.