ADVERTISEMENT

ಮಾದನೂರಿನ ಮುನಿವರ ವಿಷ್ಣುತೀರ್ಥ

ಪುಷ್ಪಾ ಮೋಹನ ಮುದಕವಿ
Published 10 ಮಾರ್ಚ್ 2021, 19:31 IST
Last Updated 10 ಮಾರ್ಚ್ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಭಾಗವತ ಶಿರೋಮಣಿಗಳಾದ ಶ್ರೀ ವಿಷ್ಣುತೀರ್ಥರದು ಅಸೀಮ ವೈರಾಗ್ಯಜೀವನ. ಅಸದೃಶ ಪಾಂಡಿತ್ಯ. ಅವಿಚ್ಛಿನ್ನ ಭಗವದ್ಭಕ್ತಿ. ಅಡವಿ ಆಚಾರ್ಯರೆಂದು ಪ್ರಖ್ಯಾತರು. ಇವರು ಮಹಾರುದ್ರದೇವರ ಅಂಶಸಂಭೂತರೆಂದು ಪ್ರತೀತಿಯಿದೆ.

ವಿಷ್ಣುತೀರ್ಥರ ಪೂರ್ವಾಶ್ರಮದ ಹೆಸರು ಜಯತೀರ್ಥಾಚಾರ್ಯ. ಜನ್ಮಸ್ಥಳ ಸತ್ಯಬೋಧತೀರ್ಥರ ತಪೋಭೂಮಿಯಾದ ಸವಣೂರಿನ ಸನಿಹದ ಸಿದ್ದಾಪುರವೆಂಬ ಪುಟ್ಟ ಗ್ರಾಮ. ಈಶ್ವರನಾಮ ಸಂವತ್ಸರ ಶ್ರಾವಣ ಬಹುಳ ಅಷ್ಟಮಿ, ಅಂದರೆ ಕ್ರಿ. ಶ. 1756ರಲ್ಲಿ ಬಾಳಾಚಾರ್ಯ-ಭಾಗೀರಥಿಬಾಯಿ ದಂಪತಿಗಳ ಮಗನಾಗಿ ಜನಿಸಿದರು. ಜಯತೀರ್ಥನಿಗೆ ಪ್ರಾರಂಭಿಕ ಪಾಠ ತಂದೆಯಿಂದಲೇ. ಮುಂದೆ ವೆಂಕಟರಾಮಾಚಾರ್ಯರಲ್ಲಿ ಶಿಷ್ಯತ್ವ ವಹಿಸಿ ಸರ್ವಶಾಸ್ತ್ರಗಳನ್ನು ಅಧ್ಯಯನ ಮಾಡಿ ಅಪಾರ ಪಾಂಡಿತ್ಯ ಗಳಿಸಿದರು. ಗೃಹಸ್ಥಾಶ್ರಮ ಪ್ರವೇಶಿಸಿದ ಜಯತೀರ್ಥಾಚಾರ್ಯರ ಸಂಸಾರಯಾನ ಸುಖಮಯವಾಗಿ ಸಾಗಿತ್ತು.

ಅನಿರೀಕ್ಷಿತ ಘಟನೆಯೊಂದುಜಯತೀರ್ಥಾಚಾರ್ಯರ ಬದುಕಿನ ದಿಕ್ಕನ್ನೇ ಬದಲಿಸಿತು. ಒಂದು ಮಧ್ಯಾಹ್ನ ಅವರು ವೈಭವೋಪೇತವಾದ ಮಂಚದ ಮೇಲೆ ಮಲಗಿದ್ದಾರೆ. ಪತ್ನಿ ಪಾದಗಳನ್ನು ಒತ್ತುತ್ತಿದ್ದಾಳೆ. ದಾಸಯ್ಯನೋರ್ವ ಭಿಕ್ಷೆಗಾಗಿ ಬಾಗಿಲ ಬಳಿ ಬಂದು ‘ಮಂಚಬಾರದು/ ಮಡದಿಬಾರಳು/ ಕಂಚುಕನ್ನಡಿ ಬಾರವು/ ಸಂಚಿತಾರ್ಥವು ಕಿಂಚ ಬಾರದು/ ಮುಂಚೆಮಾಡಿರೋ ಧರ್ಮವ’ ಎಂದು ಪುರಂದರದಾಸರ ಪದವೊಂದನ್ನು ಹಾಡುತ್ತಿದ್ದ. ಅದು ತನಗಾಗಿಯೇ ಹೇಳಿದಂತೆ ತೋರಲು ಪದದಲ್ಲಿಯ ಅಕ್ಷರಕ್ಷರವೂ ತನ್ನನ್ನೇ ಸೂಚ್ಯವಾಗಿ ಚುಚ್ಚಿದಂತೆ ಭಾಸವಾಯಿತು. ಕ್ಷಣಾರ್ಧದಲ್ಲಿ ವೈಚಾರಿಕಪ್ರಜ್ಞೆ ಜಾಗೃತವಾಯಿತು; ಭಾವಪರವಶರಾಗಿ ವೈರಾಗ್ಯ ತಾಳಿ ವಿರಕ್ತರಾಗಿ, ಹರಿಯನ್ನರಸುತ್ತಾ ಅಡವಿಯೆಡೆಗೆ ಹೊರಟೇಬಿಟ್ಟರು. ಈಗಿನ ಕೊಪ್ಪಳದ ಸಮೀಪವಿರುವ ಕಿನ್ನಾಳಿಗೆ ಆಗಮಿಸಿ ಅಲ್ಲಿಯೇ ನೆಲೆನಿಂತು ಶಿಷ್ಯರಿಗೆ ಶ್ರೀಮದಾನಂದತೀರ್ಥರ ಸಚ್ಛಾಸ್ತ್ರ ಪ್ರವಚನ ಮಾಡುತ್ತಾ ಭಗವದಾರಾಧನೆಯಲ್ಲಿ ಕಾಲ ಕಳೆಯತೊಡಗಿದರು. ಗೃಹಸ್ಥಾಶ್ರಮದಲ್ಲಿದ್ದರೂ ಯತಿಗಳಂತೆ ಜೀವಿಸಿದರು. ಸಜ್ಜನರನ್ನು ಉದ್ಧರಿಸಲೋಸುಗ ಜ್ಞಾನದ ಹೊಳೆಯನ್ನೇ ಹರಿಸಿದರು. ಶಿಷ್ಯವೃಂದವೂ ಬೆಳೆಯತೊಡಗಿತು.

ADVERTISEMENT

ಜಯತೀರ್ಥಾಚಾರ್ಯರು ಮಲಾಪಹಾರೀ ತೀರದ ಮುನವಳ್ಳಿ (ಗೌತಮ ಋಷಿಗಳ ತಪೋಭೂಮಿ)ಗೆ ಬಂದು ಅನುಷ್ಠಾನಪರರಾಗಿ ನೆಲೆಸಲು ಬಯಸಿ ಹನ್ನೆರಡು ಸಾರೆ ಸುಧಾ ಪ್ರವಚನ ಮಾಡಿದರು. ಕೀರ್ತಿ ಬೆನ್ನಟ್ಟಿ ಬಂದಿತು. ಮರಾಠಾ ಪೇಶ್ವೆ ಮುಂತಾದ ಹಲವಾರು ಪ್ರತಿಷ್ಠಿತ ವ್ಯಕ್ತಿಗಳು ಅವರ ದರ್ಶನಕ್ಕಾಗಿ ಹಾತೊರೆಯುತ್ತಿದ್ದರು. ಆಚಾರ್ಯರಿಗೆ ಸನ್ಯಾಸಾಶ್ರಮವು ಶ್ರೀ ಮದುತ್ತರಾದಿಮಠದ ಶ್ರೀ ಸತ್ಯವರತೀರ್ಥರಿಂದಾಯಿತು. ಯತ್ಯಾಶ್ರಮದ ಹೆಸರು ‘ವಿಷ್ಣುತೀರ್ಥರು’. ಪೀಠಾಧಿಪತ್ಯವನ್ನು ಬಯಸದೇ ತಪೋನಿರತರಾಗಿರಲು ಪುನಃ ಅಡವಿಯನ್ನೇ ಸೇರಿದರು; ಅಡವಿ ಆಚಾರ್ಯರೆಂದೇ ಖ್ಯಾತರಾದರು.

ವಿಷ್ಣುತೀರ್ಥರು ತಮ್ಮ 51ನೇ ವಯಸ್ಸಿನಲ್ಲಿ ಮಾದನೂರಿನಲ್ಲಿ ಮಾಘ ಕೃಷ್ಣ ತ್ರಯೋದಶಿ ಮಹಾಶಿವರಾತ್ರಿಯ ದಿನ ವೃಂದಾವನಸ್ಥರಾದರು.

ವಿಷ್ಣುತೀರ್ಥರ ಸಾಹಿತ್ಯ
ಶ್ರೀಕೃಷ್ಣಾಷ್ಟಕ, ರಮಾಸ್ತೋತ್ರ, ಆಧ್ಯಾತ್ಮಾಮೃತರಸರಂಜನಿ, ಭಾಗವತ ಸಾರೋದ್ಧಾರ, ಶ್ರೀಮನ್ಯಾಯಸುಧಾ ಟಿಪ್ಪಣಿ, ಆಜ್ಞಾಪತ್ರ, ಷೋಡಶಿ, ಚತುರ್ದಶಿ, ಗೀತಾಸಾರೋದ್ಧಾರ, ಬಿಂಬಸ್ತುತಿ ಮುಂತಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.