ADVERTISEMENT

ಭಗವಂತನ ಪ್ರಾರ್ಥನೆಯಿಂದ ಮನಃಶಾಂತಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 16:42 IST
Last Updated 22 ಜನವರಿ 2022, 16:42 IST
ಅಮ್ಮಿನಬಾವಿ ಪಂಚಗೃಹ ಹಿರೇಮಠ ಅಭಿನವ ಶಾಂತಲಿಂಗ ಶಿವಾಚಾರ್ಯ
ಅಮ್ಮಿನಬಾವಿ ಪಂಚಗೃಹ ಹಿರೇಮಠ ಅಭಿನವ ಶಾಂತಲಿಂಗ ಶಿವಾಚಾರ್ಯ   

ಮನುಕುಲದ ಬದುಕಿಗೆ ಶಾಶ್ವತ ಬೆಳಗನ್ನು ತುಂಬುವ ಅದ್ಭುತವಾದ ಶಕ್ತಿ ಪ್ರಾರ್ಥನೆಯಲ್ಲಿದೆ. ಪ್ರಾರ್ಥನೆ ಎಂಬುದು ಭಗವಂತನೊಂದಿಗೆ ನಡೆಸುವ ಭಕ್ತಿಯ ಅನುಸಂಧಾನ. ಧ್ಯಾನಸ್ಥ ಮನಸ್ಸನ್ನು ಭಗವಂತನ ಸಾನ್ನಿಧ್ಯಕ್ಕೆ ಸಮರ್ಪಿಸುವ ಮುಕ್ತ ಸ್ಥಿತಿಯೇ ನಿಜವಾದ ಪ್ರಾರ್ಥನೆ.

ತನ್ನ ಮತ್ತು ತನ್ನ ಕುಟುಂಬದ ಶ್ರೇಯಸ್ಸಿಗಾಗಿ ಮಾತ್ರ ಪ್ರಾರ್ಥನೆಯನ್ನು ನಡೆಸದೇ ಒಟ್ಟು ಮನುಕುಲದ ಜತೆಗೆ ಸಕಲ ಜೀವರಾಶಿಗಳ ಕಲ್ಯಾಣಕ್ಕಾಗಿ ಪ್ರಾರ್ಥಿಸುವುದೇ ಸರ್ವಶ್ರೇಷ್ಠವಾದದ್ದು. ಲೋಕಾಃ ಸಮಸ್ತಾಃ ಸುಖಿನೋ ಭವಂತು ಎಂದು ಹೇಳುವಲ್ಲಿ ವಿಶ್ವದ ಎಲ್ಲರೂ ಸದಾ ಸುಖಿಗಳಾಗಿರಲಿ ಎಂಬ ಪ್ರಾರ್ಥನೆ ಭಾರತೀಯ ಸಂಸ್ಕೃತಿಯಲ್ಲಿ ಅಡಕವಾಗಿದೆ. ಪ್ರಾರ್ಥನೆಗೆ ಬೇಕಾಗಿರುವುದು ಪರಿಶುದ್ಧವಾದ ಮತ್ತು ಮುಕ್ತವಾದ ಮಗುವಿನಂತಹ ಮನಸ್ಥಿತಿ ಮಾತ್ರ.

ಪವಿತ್ರವಾದ ಮನಸ್ಸು, ಅಚಲವಾದ ನಂಬಿಕೆ, ಭಕ್ತಿ, ಶ್ರದ್ಧೆಗಳೇ ಪ್ರಾರ್ಥನೆಯ ಜೀವಾಳ. ಪ್ರಾರ್ಥನೆಯ ಮೂಲಕ ಮನುಷ್ಯನಲ್ಲಿ ಸತ್ಪ್ರೇರಣೆ ಹಾಗೂ ಒಳ್ಳೆಯ ಪರಿವರ್ತನೆಯುಂಟಾಗುತ್ತದೆ. ಪ್ರಾರ್ಥನೆಯು ಹಲವು ವ್ಯಾಧಿಗಳನ್ನೂ ಗುಣಮುಖಗೊಳಿಸುತ್ತದೆ.

ADVERTISEMENT

ಭಗವಂತ ಈ ಜಗತ್ತಿನ ಪ್ರತಿಯೊಬ್ಬರ ಪ್ರಾರ್ಥನೆಯನ್ನೂ ಆಲಿಸುತ್ತಾನೆ. ಆದರೆ ಕೇವಲ ಭಕ್ತಿ ಪ್ರಣೀತ ಮುಕ್ತ ನೆಲೆಯ ಪ್ರಾರ್ಥನೆ ಮಾತ್ರ ಬಹುಬೇಗ ದೇವರನ್ನು ತಲುಪುತ್ತದೆ. ಅದಕ್ಕೆ ತಕ್ಕ ಫಲಪ್ರಾಪ್ತಿ ಕೂಡ ಲಭಿಸುತ್ತದೆ. ಅಂತಿಮವಾಗಿ ಭಗವಂತನ ಪ್ರಾರ್ಥನೆಯಿಂದ ಮಾತ್ರ ಎಲ್ಲ ದ್ವಂದ್ವ, ಗೊಂದಲ, ವೈರುಧ್ಯಗಳು ಮುಕ್ತವಾಗಿ ನಿಜವಾದ ಮನಃಶಾಂತಿ ಪ್ರಾಪ್ತವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.