ADVERTISEMENT

ಪವಾಡಪುರುಷ ಸಂತ ಸೇವಾಲಾಲ್ ಜಯಂತಿ

ಪವಾಡಪುರುಷ ಸಂತ ಸೇವಾಲಾಲ್ ಜಯಂತಿ

ಡಿ.ಎಂ.ಹಾಲಾರಾಧ್ಯ
Published 12 ಫೆಬ್ರುವರಿ 2020, 19:30 IST
Last Updated 12 ಫೆಬ್ರುವರಿ 2020, 19:30 IST
ಸಂತ ಸೇವಾಲಾರು
ಸಂತ ಸೇವಾಲಾರು   
""

ದೇಶದ ಬಂಜಾರ ಸಮುದಾಯದ ಏಕೈಕ ಸಂತ ಸೇವಾಲಾಲ್ ಅವರ 281ನೇ ಜಯಂತ್ಯುತ್ಸವ ಫೆ. 13ರಿಂದ ಮೂರು ದಿನಗಳ ಕಾಲ ಅದ್ದೂರಿಯಾಗಿ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದ ಸೇವಾಲಾಲ್ ಜನ್ಮಸ್ಥಾನದಲ್ಲಿ ನಡೆಯಲಿದೆ.

ಈ ಸಂತರ ಬಗ್ಗೆ ಅನೇಕ ಐತಿಹ್ಯಗಳಿವೆ. 1739ರಲ್ಲಿ ನ್ಯಾಮತಿ ತಾಲ್ಲೂಕಿನ (ಹಿಂದೆ ಹೊನ್ನಾಳಿ) ಸೂರಗೊಂಡನಕೊಪ್ಪದಲ್ಲಿ ಭೀಮಾನಾಯ್ಕ ಮತ್ತು ಧರ್ಮಿಣಿ ಮಾತೆ ದಂಪತಿಯ ಮಗನಾಗಿ ಜನ್ಮತಾಳಿದ ಸಂತ ಸೇವಾಲಾಲ್ ಸೂರಗೊಂಡನಕೊಪ್ಪದಲ್ಲಿ ಅನೇಕ ಪವಾಡಗಳನ್ನು ನಡೆಸಿದ್ದಾರೆ.

ಬಾಲಕನಾಗಿ ಬೆಳೆಯುತ್ತಿದ್ದಾಗ ಚಿನ್ನಿಕಟ್ಟೆ ಸುತ್ತಮುತ್ತ ಗೋವುಗಳನ್ನು ಮೇಯಿಸಲು ಹೋಗುತ್ತಿದ್ದಾಗಲೇ ಸಹಪಾಠಿಗಳೊಂದಿಗೆ ಆಟವಾಡುತ್ತ ಪವಾಡಗಳನ್ನು ತೋರುತ್ತಿದ್ದರು. ಬಂಡಿಯನ್ನು ನಗಾರಿಯನ್ನಾಗಿ ಬಾರಿಸುವುದು, ಕೆಸರನ್ನು ಹುಗ್ಗಿ ಪಾಯಸವನ್ನಾಗಿಸುವುದು, ನೀರನ್ನು ತುಪ್ಪ ಮಾಡಿ ಯಜ್ಞ ಮಾಡುತ್ತಿದ್ದರು ಎನ್ನುವ ಪ್ರತೀತಿ ಇದೆ. ದೇವಿ ಮರಿಯಮ್ಮ ಅವರಿಂದ ದೊರೆತ ದಿವ್ಯಶಕ್ತಿಯನ್ನು ಬಂಜಾರರು ಸೇರಿ ಅಲೆಮಾರಿ ಜೀವನ ನಡೆಸುವ ಸಮುದಾಯಗಳನ್ನು ಉದ್ಧರಿಸಲು ಬಳಸಿದ ಸಂತ ಇವರು ಎಂಬ ಕಥೆಗಳು ಚಾಲ್ತಿಯಲ್ಲಿವೆ. ಮಹಾರಾಷ್ಟ್ರದ ಪೌರಾಗಢದಲ್ಲಿ (ಪೌರಾದೇವಿಯ ಸ್ಥಳ) ಸೇವಾಲಾಲರು ಐಕ್ಯರಾದರು ಎಂದು ಇತಿಹಾಸ ಹೇಳುತ್ತದೆ.

ADVERTISEMENT
ಸೂರಗೊಂಡನಕೊಪ್ಪದಲ್ಲಿರುವ ಸಂತ ಸೇವಾಲಾಲ್ ಅವರ ಸುಂದರ ಮೂರ್ತಿ

ಈಚಿನ ವರ್ಷಗಳಲ್ಲಿ ಇಲ್ಲಿಯ ಮಹತ್ವವನ್ನು ಅರಿತ ಸರ್ಕಾರಗಳು ಕೋಟ್ಯಂತರ ರೂಪಾಯಿ ಅನುದಾನ ನೀಡಿ, ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಮೂಲಕ ಪವಿತ್ರ ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಿವೆ. ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಹಾಗೂ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಬೆಂಗಳೂರು ಮತ್ತು ಜಿಲ್ಲಾಡಳಿತ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ನೇತೃತ್ವ ವಹಿಸಿವೆ.

ಫೆ. 13ರಂದು ಆರಂಭವಾಗುವ ಜಾತ್ರೆಗೆ ಜಿಲ್ಲಾಡಳಿತ ಸಕಲ ವ್ಯವಸ್ಥೆ ಕಲ್ಪಿಸಿದೆ. ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಯುವಕರು, ಮಾಲಾಧಾರಿಗಳು ಪಾದಯಾತ್ರೆ, ವಾಹನಗಳ ಮೂಲಕ ಇಲ್ಲಿ ಸೇರುತ್ತಾರೆ.

2018ರ ಫೆಬ್ರುವರಿ 15ರಂದು ಸೇವಾಲಾಲರ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ಆಚರಿಸುವಂತೆ ಸರ್ಕಾರ ಆದೇಶಿಸಿದ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಲ್ಲಿ ಸೇವಾಲಾಲರ ಜಯಂತಿ ಆಚರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.