ಹುಣಸೂರು: ತಾಲ್ಲೂಕಿನ ರಾಮೇನಹಳ್ಳಿ ಬಳಿ ಲಕ್ಷ್ಮಣತೀರ್ಥ ನದಿಯಲ್ಲಿ ಸ್ನಾನ ಮಾಡಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಗುರುವಾರ ನಡೆದಿದೆ.
ತಾಲ್ಲೂಕಿನ ಹೊಸಪೆಂಜಳ್ಳಿಯ ರವಿಗೌಡ (19) ಮತ್ತು ಹನಗೋಡಿನ ನಿತೀಶ್ (21) ಮೃತಪಟ್ಟವರು. ಓಂಕಾರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ರಾಮೇನಹಳ್ಳಿಯ ಲಕ್ಷ್ಮಣತೀರ್ಥ ನದಿಯಲ್ಲಿ ನಡೆಯುವ ತೆಪ್ಪೋತ್ಸವ ನೋಡಲು ಇವರು ತಮ್ಮ ಸ್ನೇಹಿತರ ಮನೆಗೆ ಬಂದಿದ್ದರು.
ನದಿಯಲ್ಲಿ ಸ್ನಾನ ಮಾಡುವಾಗ ನಿತೀಶ್ ಮುಳುಗಿದ. ಈತನನ್ನು ರಕ್ಷಿಸಲು ಮುಂದಾದ ರವಿಗೌಡ ಸಹ ನೀರುಪಾಲಾದ. ನಿತೀಶ್ ದ್ವಿತೀಯ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದು, ಈತನಿಗೆ ಈಜಲು ಬರುತ್ತಿರಲಿಲ್ಲ ಎನ್ನಲಾಗಿದೆ. ರವಿಗೌಡ ಉತ್ತಮ ಈಜುಗಾರನಾಗಿದ್ದು, ಬೆಂಗಳೂರಿನಲ್ಲಿ ಬುಧವಾರ ನಡೆದ ಪೇದೆ ನೇಮಕಾತಿ ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ರವಿಗೌಡ ಮತ್ತು ನಿತೀಶ್ ಅವರೊಂದಿಗೆ ಬಂದಿದ್ದ ದೀಪಕ್ ಮತ್ತು ಗಣೇಶ್ ನಾಪತ್ತೆಯಾಗಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.