ADVERTISEMENT

ಉಪ ಕಸುಬಾಗಿ ಮೀನು ಕೃಷಿ: ರೈತರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 19:30 IST
Last Updated 23 ಜನವರಿ 2012, 19:30 IST

ವಿಜಾಪುರ: `ಕಡಿಮೆ ಅವಧಿಯಲ್ಲಿ ಲಾಭ ತರುವ ಮೀನು ಕೃಷಿಯನ್ನು ಉಪ ಕಸುಬಾಗಿ ಅಳವಡಿಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು~ ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ರೈತರಿಗೆ ಸಲಹೆ ನೀಡಿದರು.

ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಕೆರೆ ಬಳಕೆದಾರರ ಸಂಘದ ಸದಸ್ಯರ ಗುಂಪುಗಳ ಫಲಾನುಭವಿಗಳಿಗೆ ಮೀನು ಕೃಷಿ ಮತ್ತು ಸಿಹಿ ನೀರು ಸಿಗಡಿ ಕೃಷಿ ಕುರಿತಂತೆ ಜಲಸಂವರ್ಧನ ಸಂಘ, ಜಲ ಸಂಪನ್ಮೂಲ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ತರಬೇತಿ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಅಲಂಕಾರಿಕ ಮೀನು,  ಸಿಗಡಿ ಹಾಗೂ ಮೀನುಗಳಿಗೆ ಅಪಾರ ಬೇಡಿಕೆ ಇದೆ. ರಾಜ್ಯಕ್ಕೆ ನೆರೆಯ ಆಂಧ್ರ, ಇತರ ರಾಜ್ಯಗಳಿಂದ ಮೀನು ತರಿಸಿಕೊಳ್ಳಲಾಗುತ್ತಿದೆ ಎಂದರು.

ಭೂತನಾಳ ಮೀನು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಶಿವಪ್ರಕಾಶ, ಒಂದು ಎಕರೆ ಜಮೀನಿನಲ್ಲಿ ಕೃಷಿ ಬೆಳೆ ಮಾಡಿ ಲಾಭ ಗಳಿಸುವುದಕ್ಕಿಂತ ಅಷ್ಟೇ ಜಮೀನಿನಲ್ಲಿ ಮೀನುಗಾರಿಕೆ ಮಾಡಿದರೆ ದ್ವಿಗುಣ ಲಾಭ ಗಳಿಸಬಹುದು ಎಂದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅಮರೇಶ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಜಲ ಸಂವರ್ಧನಾ ಯೋಜನಾ ಸಂಘದ ಸಮನ್ವಯ ಅಧಿಕಾರಿ ಎಸ್.ಎಲ್. ವಾರಣಾಸಿ, ಸಹಾಯಕ ಎಂಜಿನಿಯರ್ ಕಾಂಬಳೆ ಹಾಜರಿದ್ದರು. ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಮಕೃಷ್ಣ  ಸ್ವಾಗತಿಸಿದರು.

ಜಲಸಂವರ್ಧನಾ ಯೋಜನಾ ಸಂಘದ ಆರ್ಥಿಕ ಸಲಹೆಗಾರ ಮ್ಯೋಗೇರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.