ADVERTISEMENT

ಎಂಪಿಎಂ ಕಾರ್ಖಾನೆ: ಕಬ್ಬು ಅರೆಯುವಿಕೆ ಆರಂಭ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 19:30 IST
Last Updated 9 ಸೆಪ್ಟೆಂಬರ್ 2011, 19:30 IST
ಎಂಪಿಎಂ ಕಾರ್ಖಾನೆ: ಕಬ್ಬು ಅರೆಯುವಿಕೆ ಆರಂಭ
ಎಂಪಿಎಂ ಕಾರ್ಖಾನೆ: ಕಬ್ಬು ಅರೆಯುವಿಕೆ ಆರಂಭ   

ಶಿವಮೊಗ್ಗ:ಭದ್ರಾವತಿಯ ಎಂಪಿಎಂ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಎಂಪಿಎಂ ಅಧ್ಯಕ್ಷ ಆರಗ ಜ್ಞಾನೇಂದ್ರ ಮಾತನಾಡಿ, ಈ ವರ್ಷ ಸುಮಾರು 4 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಿದ್ದು, ರೈತರೊಂದಿಗೆ ಈಗಾಗಲೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.

ಕಾರ್ಖಾನೆಯ ಯಂತ್ರೋಪಕರಣಗಳು 25 ವರ್ಷ ಹಳೆಯದಾಗಿರುವುದರಿಂದ ದುರಸ್ತಿ, ಬಿಡಿ ಭಾಗಗಳ ಬದಲಾವಣೆ, ಹೊಸ ಯಂತ್ರಗಳ ಖರೀದಿ ಮತ್ತಿತರ ಕಾಮಗಾರಿಗೆ ರೂ 1.50 ಕೋಟಿ ವೆಚ್ಚ ಮಾಡಲಾಗಿದೆ. ಇದರಿಂದಾಗಿ ರೈತರು ಬೆಳೆದ ಕಬ್ಬನ್ನು ಬೇರೆಡೆ ಕೊಂಡೊಯ್ಯದೆ ಇಲ್ಲಿಗೆ ಪೂರೈಸಬೇಕು ಎಂದರು.

2009-10ನೇ ಸಾಲಿನಲ್ಲಿ ಕಾರ್ಖಾನೆಗೆ 87 ಸಾವಿರ ಟನ್ ಕಬ್ಬು ಪೂರೈಸಿದ್ದ ರೈತರಿಗೆ ಹೆಚ್ಚುವರಿ ಬೆಲೆ ಬಾಕಿ ಹಣ ಪಾವತಿಸಲು ಸರ್ಕಾರ ರೂ 5 ಕೋಟಿ ಅನುದಾನ ನೀಡಿದ್ದು, ಒಂದು ವಾರದಲ್ಲಿ ರೈತರಿಗೆ ಚೆಕ್ ಮೂಲಕ ಹಣ ಪಾವತಿಸಲಾಗುವುದು ಎಂದರು.

ಎಂಪಿಎಂ ಕಾರ್ಖಾನೆಯನ್ನು ಲಾಭದಾಯಕ ಮಾಡುವ ದೃಷ್ಟಿಯಿಂದ ಸರ್ಕಾರದ ವಿಶೇಷ ನೆರವಿನೊಂದಿಗೆ ಡಿ.ಇಂಕಿಂಗ್ ಪಲ್ಪ್ ಕಾರ್ಖಾನೆ ಆರಂಭಿಸಲಾಗುವುದು. ಇದಕ್ಕೆ ನವೆಂಬರ್‌ನಲ್ಲಿ ಶಂಕುಸ್ಥಾಪನೆ ನೆರವೇರಿಸುವ ಉದ್ದೇಶವಿದೆ ಎಂದರು.

ಬಹಳಷ್ಟು ನೌಕರರು ಪ್ರಾಮಾಣಿಕವಾಗಿ ದುಡಿಯುವ ಮೂಲಕ ಕಾರ್ಖಾನೆಯನ್ನು ಲಾಭದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಬೆರಳೆಣಿಕೆಯಷ್ಟು ನೌಕರರು ಸಣ್ಣ ಪುಟ್ಟ ವಿಚಾರಗಳನ್ನು ಮುಂದಿಟ್ಟುಕೊಂಡು, ಅಶಿಸ್ತಿನಿಂದ ನಡೆದುಕೊಂಡಿರುವುದನ್ನು ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಲಿದೆ. ಅಂತಹವರ ವಿರುದ್ಧ ಕಾನೂನುಕ್ರಮ ಕೈಗೊಳ್ಳಲಿದೆ ಎಂದರು.ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ. ಗಾರ್ಗಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.