ADVERTISEMENT

ಎರಡು ಸಾವಿರ ಅಡಿಕೆ ಮರಗಳು ಬೆಂಕಿಗೆ ಆಹುತಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 19:30 IST
Last Updated 21 ಫೆಬ್ರುವರಿ 2012, 19:30 IST

ಗುಬ್ಬಿ: ತಾಲ್ಲೂಕಿನ ಕೆ.ಜಿ.ಟೆಂಪಲ್ ಸಮೀಪದ ಸುರುಗೇನಹಳ್ಳಿ ಕಾವಲ್ ಗ್ರಾಮದ ವೆಂಕಟಮ್ಮ ಎಂಬುವವರ 5.35 ಎಕರೆ ಭೂಮಿಯಲ್ಲಿದ್ದ ಅಡಿಕೆ, ತೆಂಗು, ಬಾಳೆ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಘಟನೆಯಲ್ಲಿ ಮೂರು ವರ್ಷದ ಎರಡು ಸಾವಿರ ಅಡಿಕೆ ಮರಗಳು, ಎರಡನೇ ಕೊಯ್ಲಿನ ನಾಲ್ಕು ಸಾವಿರ ಬಾಳೆ, ನೂರು ತೆಂಗಿನ ಸಸಿ ಹಾಗೂ ಹನಿ ನೀರಾವರಿಗೆ ಅಳವಡಿಸಿದ್ದ ಪೈಪ್‌ಗಳು ಸಂಪೂರ್ಣ ಸುಟ್ಟು ಹೋಗಿವೆ.

ಇದರಿಂದ ಸುಮಾರು ನಾಲ್ಕರಿಂದ-ಐದು ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ. ಮಂಗಳವಾರ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸುರುಗೇನಹಳ್ಳಿ ಗುಡ್ಡದಲ್ಲಿ ಕುರುಚಲು ಕಾಡಿದ್ದು, ರಾತ್ರಿ ವೇಳೆ ದುಷ್ಕರ್ಮಿಗಳು ಅದಕ್ಕೆ ಬೆಂಕಿ ಹಾಕಿದ್ದಾರೆ. ಆ ಬೆಂಕಿಯ ಕೆನ್ನಾಲಿಗೆ ಸಮೀಪದಲ್ಲಿದ್ದ ತೋಟಕ್ಕೂ ವ್ಯಾಪಿಸಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸಿ.ಎಸ್.ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.