ADVERTISEMENT

ಒಪೆಕ್ ಆಸ್ಪತ್ರೆ ಸ್ವಾಯತ್ತತೆಗೆ ಒತ್ತಾಯಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2012, 19:30 IST
Last Updated 18 ಜೂನ್ 2012, 19:30 IST
ಒಪೆಕ್ ಆಸ್ಪತ್ರೆ ಸ್ವಾಯತ್ತತೆಗೆ ಒತ್ತಾಯಿಸಿ ಧರಣಿ
ಒಪೆಕ್ ಆಸ್ಪತ್ರೆ ಸ್ವಾಯತ್ತತೆಗೆ ಒತ್ತಾಯಿಸಿ ಧರಣಿ   

ರಾಯಚೂರು: ಒಪೆಕ್ ನೆರವಿನೊಂದಿಗೆ ಸ್ಥಾಪಿಸಿದ ರಾಜೀವ್‌ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ(ರಿಮ್ಸ)ಗೆ ವಹಿಸಿದ ಆದೇಶವನ್ನು ಕೂಡಲೇ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಸೋಮವಾರ ಒಪೆಕ್ ಉಳಿಸಿ ಹೋರಾಟ ಸಮಿತಿ ನೀಡಿದ್ದ ರಾಯಚೂರು ಬಂದ್ ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.

ನಗರದ ಸೂಪರ್ ಮಾರ್ಕೆಟ್ ವೃತ್ತದಲ್ಲಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ಬಗ್ಗೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ವೈದ್ಯಕೀಯ ಶಿಕ್ಷಣ ಸಚಿವರು ರಾಜೀವಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಕೈಗೊಂಡಿರುವ ತೀರ್ಮಾನವನ್ನು ಒಪೆಕ್ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ಭಾಗಶಃ ವಿರೋಧಿಸುತ್ತದೆ. ಒಪೆಕ್ ಆಸ್ಪತ್ರೆಯ 286 ಸಿಬ್ಬಂದಿ ವಿಷಯದಲ್ಲಿ ಪುನಃ ಹೊರ ಸಂಪನ್ಮೂಲ ನೀತಿಯನ್ನು ಪ್ರಕಟಿಸುವುದರ ಮೂಲಕ ನಕಾರಾತ್ಮಕ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಟೀಕಿಸಿದರು.

ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಚೀಟಿ ಹೊಂದಿದ ರೋಗಿಗಳಿಗೆ ಉಚಿತ ಹಾಗೂ ಎಪಿಎಲ್ ಚೀಟಿ ಹೊಂದಿದ ರೋಗಿಗಳಿಗೆ ಶೇ 40ರಷ್ಟು ರಿಯಾಯ್ತಿ ದರದಲ್ಲಿ ಚಿಕಿತ್ಸೆ ನೀಡಬೇಕು. ಆಸ್ಪತ್ರೆಯ 286 ಸಿಬ್ಬಂದಿ ಹಾಗೂ ಕಾರ್ಮಿಕರನ್ನು ರಾಜೀವ್‌ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇವೆಯಲ್ಲಿ ಮುಂದುರಿಸಬೇಕು ಎಂದು ಸಂಚಾಲಕರಾದ ಆರ್.ಮಾನಸಯ್ಯ, ಅಂಬಣ್ಣ ಆರೋಲಿ, ಬಸವರಾಜ ಕಳಸ ಅವರು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದ್ದಾರೆ.

ಜೆಡಿಎಸ್ ಜಿಲ್ಲಾ ವಕ್ತಾರ ಎಂ.ವಿರುಪಾಕ್ಷಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಷೀರುದ್ದೀನ್, ಮಹಾಂತೇಶ ಪಾಟೀಲ್ ಅತ್ತನೂರು, ಎಸ್.ಶಿವಕುಮಾರ ಯಾದವ್, ಎಸ್.ರಾಜಶೇಖರ, ರಜಾಕ್ ಉಸ್ತಾದ್, ರವೀಂದ್ರ ಜಲ್ದಾರ್, ನಗರಸಭೆ ಸದಸ್ಯರಾದ ಬಿ.ತಿಮ್ಮಾರೆಡ್ಡಿ, ಎಂ.ಪವನಕುಮಾರ,ಎಚ್.ಡಿ ಭರಮಣ್ಣ, ಕೆ.ರಾಜೇಶಕುಮಾರ, ಆರ್. ಹುಚ್ಚರೆಡ್ಡಿ, ಬಸವರಾಜ ಬಾಗಲವಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.