ADVERTISEMENT

ಕಳಪೆ ಕಾಮಗಾರಿ: ಯುವ ಕಾಂಗ್ರೆಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST

ಕೊಪ್ಪ:  ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಕಳಪೆ ಕಾಮಗಾರಿಯನ್ನು  ವಿರೋಧಿಸಿ  ಯುವ ಕಾಂಗ್ರೆಸ್ ಕಾರ್ಯಕರ್ತರು  ಪಟ್ಟಣ ಪಂಚಾಯಿತಿ ಕಾರ್ಯಾಲಯದ ಮುಂಭಾಗ ಶುಕ್ರವಾರ ಸಾಂಕೇತಿಕ ಪ್ರತಿಭಟನಾ ಧರಣಿ ನಡೆಸಿದರು.

 ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿ ಕಳಪೆಯಾಗಿದ್ದು ದುರಸ್ತಿಗೆ ಒತ್ತಾಯಿಸಿ ಈ ಹಿಂದೆ ಕಾಂಗ್ರೆಸ್ ಪ್ರತಿಭಟನೆ ನಡೆಸಿ ಹಕ್ಕೋತ್ತಾಯ ಮಾಡಿತ್ತು. ನಿರ್ಲಕ್ಷ್ಯ ವಹಿಸಿರುವ ಕ್ರಮ ಪ್ರತಿಭಟಿಸಿ ಧರಣಿ ನಡೆಸುತ್ತಿರುವುದಾಗಿ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ ಉಮೇಶ್ ಹೇಳಿದರು.

  ಎಚ್.ಜಿ.ವೆಂಕಟೇಶ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಅವರ ಕಾಲದಲ್ಲಿ ನಿರ್ಮಾಣವಾದ ಕಾಂಕ್ರಿಟ್ ರಸ್ತೆ ಐದು ದಶಕ ಕಳೆದರೂ ಚೆನ್ನಾಗಿದೆ. ಆದರೆ ಪ.ಪಂ.ಈ ವರ್ಷ ನಿರ್ಮಿಸಿರುವ ಕಾಂಕ್ರಿಟ್ ರಸ್ತೆ 15 ದಿನಕ್ಕೆ ಕಿತ್ತುಹೋಗಿರುವುದು ಕಾಮಗಾರಿ ಕಳಪೆಯಾಗಿರುವುದಕ್ಕೆ  ನಿದರ್ಶನ ಎಂದರು.
 ನರಸಿಂಹರಾಜಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಂಶುಮಂತ್ ಮಾತನಾಡಿ, ಬಿಜೆಪಿ ಭ್ರಷ್ಟರ ಪಕ್ಷವಾಗಿ ಪರಿವರ್ತನೆಗೊಂಡಿದೆ ಎಂದು ಟೀಕಿಸಿದರು.

ಸ್ಥಳಕ್ಕೆ ಆಗಮಿಸಿದ ಪ.ಪಂ. ಅಧ್ಯಕ್ಷ ಉಮೇಶ್ ಶೇಟ್ ಪ್ರತಿಭಟನಾಕಾರರ ಅಹವಾಲು ಆಲಿಸಿ, ಕಾಂಕ್ರಿಟ್ ರಸ್ತೆ ನಿರ್ಮಾಣದಲ್ಲಿ ಆಗಿರುವ ಲೋಪ ಸರಿಪಡಿಸುವುದಾಗಿ ಭರವಸೆ ನೀಡಿದರು. ರಸ್ತೆ ನಿರ್ಮಾಣ ಮಾಡಿದ ಗುತ್ತಿಗೆದಾರರಿಗೆ ಎರಡು ವರ್ಷ ನಿರ್ವಹಣೆಯ ಜವಾಬ್ದಾರಿಯಿದೆ ಎಂದರು. ಅಧ್ಯಕ್ಷರ ಆಶ್ವಾಸನೆ ನಂತರ ಪ್ರತಿಭಟನೆ ಕೈಬಿಡಲಾಯಿತು.

ಪ್ರತಿಭಟನೆಯಲ್ಲಿ ಕಿಸಾನ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಸಚಿನ್ ಮೀಗ, ಜಯಶೀಲ, ಹರೀಶ್ ಭಂಡಾರಿ, ಅಬ್ದುಲ್ ಖಾದರ್, ಎಚ್.ಎಲ್.ದೀಪಕ್, ಸಿ.ರಾಧಾ, ದೇವರಾಜ್, ನವೀನ್, ಬರ್ಕತ್‌ಆಲಿ, ಎಸ್.ಎಸ್.ಸಂಜಯ್, ನುಗ್ಗಿ ಮಂಜುನಾಥ್, ಓಣಿತೋಟ ರತ್ನಾಕರ್, ಎಚ್.ಎಸ್.ಇನೇಶ್, ಶ್ರೀನಿವಾಸ್, ಪ್ರಮೋದ್, ಸಂದೇಶ್ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.