ADVERTISEMENT

ಕೈಗಾರಿಕೆಗಳಿಂದ ನಿರುದ್ಯೋಗ ನಿವಾರಣೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2011, 19:30 IST
Last Updated 11 ಏಪ್ರಿಲ್ 2011, 19:30 IST

ಗುಲ್ಬರ್ಗ: ಉದ್ಯಮಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಎಲ್ಲ ವಿಧದ ಸೌಲಭ್ಯ ಕಲ್ಪಿಸಲಿದ್ದು, ಕೈಗಾರಿಕೆಗಳ ಸ್ಥಾಪನೆಯಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ ಎಂದು ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ (ಎಚ್‌ಕೆಡಿಬಿ) ಅಧ್ಯಕ್ಷ ಅಮರನಾಥ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು. ಗುಲ್ಬರ್ಗ ಉತ್ಸವದ ಅಂಗವಾಗಿ ಸೋಮವಾರ ನಗರದಲ್ಲಿ ಆಯೋಜಿಸಿದ್ದ ವಿಭಾಗೀಯ ಮಟ್ಟದ ತಾಂತ್ರಿಕ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗುಲ್ಬರ್ಗದಲ್ಲಿ ನಡೆಯುತ್ತಿರುವ ಉತ್ಸವವು ಈ ಭಾಗದ ಪರಂಪರೆಯನ್ನು ಪ್ರತಿಬಿಂಬಿಸಲಿದೆ.

ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗೂ ಇದು ನೆರವಾಗಬೇಕು ಎಂಬ ಸದಾಶಯದಿಂದ ತಾಂತ್ರಿಕ ವಿಚಾರಗೋಷ್ಠಿ ಏರ್ಪಡಿಸಲಾಗಿದೆ ಎಂದು ಅವರು ನುಡಿದರು. “ಹೈದರಾಬಾದ ಕರ್ನಾಟಕ ಪ್ರದೇಶ ಹಿಂದುಳಿದಿದೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಇದನ್ನು ತೆಗೆದು ಹಾಕಲು ಈ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಬೇಕು. ಉತ್ಸವದ ಜತೆಯಲ್ಲೇ ಮೂಲಸೌಕರ್ಯ ಅಭಿವೃದ್ಧಿಗೆ ಚರ್ಚೆ ನಡೆಯಬೇಕು. ಇದು ಈ ಮೂರು ದಿನಗಳ ವಿಚಾರಗೋಷ್ಠಿಯ ಮುಖ್ಯ ಉದ್ದೇಶವಾಗಿದೆ” ಎಂದು ಅಮರನಾಥ ಪಾಟೀಲ ಹೇಳಿದರು. ಬೆಂಗಳೂರಿನಲ್ಲಿ ಕಳೆದ ವರ್ಷ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸಲು ಅನೇಕ ಉದ್ಯಮಿಗಳು ಮುಂದೆ ಬಂದಿದ್ದಾರೆ.

ಈ ಪ್ರಕ್ರಿಯೆಯನ್ನು ಮುಂದುವರಿಸುವುದು ಹಾಗೂ ಉದ್ಯಮಿಗಳಿಗೆ ಬೇಕಾದ ಸೂಕ್ತ ಮೌಲಸೌಲಭ್ಯದ ಬಗ್ಗೆ ಚರ್ಚೆ ನಡೆಸಲು ವಿಚಾರಗೋಷ್ಠಿ ನೆರವಾಗಲಿದೆ ಎಂದು ಅವರು ಹೇಳಿದರು.ಗೋಪಾಲಕೃಷ್ಣ ರಘೋಜಿ ಅಧ್ಯಕ್ಷತೆ ವಸಿದ್ದರು. ಎಂಎಸ್‌ಐಎಲ್ ಅಧ್ಯಕ್ಷ ಡಾ. ವಿಕ್ರಮ್ ಪಾಟೀಲ್, ಎಚ್‌ಕೆಡಿಬಿ ಕಾರ್ಯದರ್ಶಿ ಶಾಲಿನಿ ರಜನೀಶ್, ಕೈಗಾರಿಕಾಭಿವೃದ್ಧಿ ಆಯುಕ್ತ ಡಾ. ರಾಜಕುಮಾರ ಖತ್ರಿ, ಕರ್ನಾಟಕ ಉದ್ಯೋಗ ಮಿತ್ರ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರರಾವ, ಉಮಾಕಾಂತ ನಿಗ್ಗುಡಗಿ, ಕಾರ್ಯದರ್ಶಿ ಸೋಮಶೇಖರ್ ಟೆಂಗಳಿ ಉಪಸ್ಥಿತರಿದ್ದರು. ಕಾಸಿಯಾ ಸಂಘದ ಅಧ್ಯಕ್ಷ ಎಸ್.ಎಸ್. ಬಿರಾದಾರ ಸ್ವಾಗತಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.