ಔರಾದ್: ಈಚಿನ ದಿನಗಳಲ್ಲಿ ಕಾನೂನಿನಲ್ಲೂ ಕ್ಲಿಷ್ಟತೆಯಾಗಿ ತೀರ್ಪು ಬರುವಲ್ಲಿ ವಿಳಂಬವಾಗುತ್ತಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎನ್. ಆನಂದ ಶುಕ್ರವಾರ ಇಲ್ಲಿ ತಿಳಿಸಿದರು.
ಹೊಸದಾಗಿ ಆರಂಭವಾದ ಇಲ್ಲಿನ ಹಿರಿಯ ಶ್ರೇಣಿ ನ್ಯಾಯಾಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಕೀಲರು ಕಕ್ಷಿದಾರರಿಗೆ ಸರಿಯಾದ ಮಾರ್ಗ ತೋರಿಸಿದರೆ ಅವರಿಗೆ ಬೇಗ ನ್ಯಾಯ ಸಿಗುತ್ತದೆ. ಕಕ್ಷಿದಾರರು ಮತ್ತು ವಕೀಲರು ನ್ಯಾಯಾಲಯಕ್ಕೆ ವಾಸ್ತವ ಸಂಗತಿ ತಿಳಿಸಿದರೆ ನ್ಯಾಯ ಕೊಡುವಲ್ಲಿ ವಿಳಂಬ ತಪ್ಪಿಸಬಹುದಾಗಿದೆ ಎಂಬ ಕಿವಿಮಾತು ಹೇಳಿದರು.
`ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ~ ಎಂಬ ಶರಣರ ಸಂದೇಶ ಅರಿತು ನಡೆದರೆ ಸಾಮಾಜಿಕ ನ್ಯಾಯ ಎತ್ತಿ ಹಿಡಿದಂತೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಇದೇ ಜಿಲ್ಲೆಯವರಾದ ನ್ಯಾಯಮೂರ್ತಿ ಎನ್.ಕೆ. ಪಾಟೀಲ ಮಾತನಾಡಿ ಈ ಭಾಗ ಹಿಂದುಳಿದಿದೆ ಎಂದು ಭಾವಿಸಬೇಕಿಗಿಲ್ಲ. ಜನ ಮತ್ತು ಜನಪ್ರತಿನಿಧಿಗಳು ಇಚ್ಛಾಶಕ್ತಿ ಹೊಂದಿದ್ದರೆ ಪ್ರಗತಿ ಸಾಧಿಸಬಹುದಾಗಿದೆ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶೈಕ್ಷಣಿಕ ಪರಿಸರ ಕಲ್ಪಿಸಿಕೊಟ್ಟರೆ ಅದ್ಭುತ ಸಾಧನೆ ಮಾಡಿ ತೋರಿಸುವ ಸಾಮರ್ಥ್ಯ ಹೊಂದಿದ್ದಾರೆಎಂದು ತಿಳಿಸಿದರು.
ಹಿರಿಯ ಶ್ರೇಣಿ ನ್ಯಾಯಾಲಯಕ್ಕೆ ಬೇಕಾದ ಅವಶ್ಯಕತೆ ಪೂರೈಸಲು ಪ್ರಯತ್ನಿಸುವುದಾಗಿ ಹೇಳಿದರು.
ದೀರ್ಘ ಕಾಲದ ಬೇಡಿಕೆ ಫಲವಾಗಿ ಇಲ್ಲಿ ಹಿರಿಯ ಶ್ರೇಣಿ ನ್ಯಾಯಾಲಯ ಸೌಲಭ್ಯ ಸಿಕ್ಕಿದ್ದರಿಂದ ಸಂತಸವಾಗಿದೆ. ನ್ಯಾಯಾಲಯ ಹೆಚ್ಚುವರಿ ಕಟ್ಟಡ ಸೇರಿದಂತೆ ಇತರೆ ಅಗತ್ಯ ಕಾಮಗಾರಿಗಳಿಗಾಗಿ ಅನುದಾನ ನೀಡುವುದಾಗಿ ಮುಖ್ಯ ಅತಿಥಿಯಾಗಿದ್ದ ಶಾಸಕ ಪ್ರಭು ಚವ್ಹಾಣ್ ಭರವಸೆ ನೀಡಿದರು.
ವಕೀಲ ಕರ್ಸೆ ನಿರೂಪಿಸಿದರು. ನ್ಯಾಯಾಧೀಶ ವೆಂಕಟೇಶ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.