ಹುಬ್ಬಳ್ಳಿ: ಕಳೆದ ಫೆಬ್ರುವರಿ 8ರಂದು ನಿಧನರಾದ ಹೆಸರಾಂತ ರಂಗಕರ್ಮಿ ಗುಡಗೇರಿ ಬಸವರಾಜ ಸ್ಮರಣಾರ್ಥ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲ್ಲೂಕಿನ ಗೊಟಗೋಡಿ ಗ್ರಾಮದ ಉತ್ಸವ ರಾಕ್ ಗಾರ್ಡನ್ನಲ್ಲಿ ಶಿಲ್ಪವನ್ನು ನಿರ್ಮಿಸಿದ್ದು ಬುಧವಾರ ಉದ್ಘಾಟನೆಯಾಗಲಿದೆ.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ ಉದ್ಘಾಟಿಸಲಿರುವ ಈ ಶಿಲ್ಪವನ್ನು ಕಲಾವಿದ ತಿಪ್ಪಣ್ಣ ಸೊಲಬಕ್ಕನವರ ತಮ್ಮ ಜಮೀನಿನಲ್ಲಿಯೇ ರೂಪಿಸಿದ್ದಾರೆ. ಬಸವರಾಜ ನಿಧನದ ನಂತರ ಒಂದು ವರ್ಷದಿಂದ ಶಿಲ್ಪ ರಚನೆಗಾಗಿ ತಿಪ್ಪಣ್ಣ ದುಡಿದಿದ್ದಾರೆ.
ಶಿಲ್ಪವನ್ನು ಬಂಡಿ ಮೇಲೆ ನಿಲ್ಲಿಸಿರುವ ಬಗ್ಗೆ `ಪ್ರಜಾವಾಣಿ~ ಅವರನ್ನು ಮಾತನಾಡಿಸಿದಾಗ ಗುಡಗೇರಿ ಬಸವರಾಜ ವೃತ್ತಿ ಜೀವನದಲ್ಲಿ ಕಂಡ ಬದಲಾವಣೆಗಳನ್ನು ಸಾಂಕೇತಿಕವಾಗಿ ತಿಳಿಸಲು ಅವರ ಶಿಲ್ಪವನ್ನು ಬಂಡಿ ಮೇಲೆ ನಿಲ್ಲಿಸಿದ್ದೇವೆ. ಇಬ್ಬರೂ ಗೆಳೆಯರಾಗಿದ್ದೆವು. ಅವರ ಪ್ರಥಮ ಪುಣ್ಯತಿಥಿಗೆ ಶಿಲ್ಪವೊಂದನ್ನು ಸ್ಥಾಪಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇವೆ~ ಎಂದರು.
`ಬಂಡಿ ಸೇರಿ ಒಟ್ಟು 15 ಅಡಿ ಎತ್ತರ ಇರುವ ಶಿಲ್ಪದ ಸುತ್ತಮುತ್ತ ಇನ್ನೂ ಅನೇಕ ಹೆಸರಾಂತ ರಂಗ ಕಲಾವಿದ ಶಿಲ್ಪಗಳನ್ನು ನಿರ್ಮಿಸುವೆ~ ಎಂದು ತಿಪ್ಪಣ್ಣ ಮುಂದಿನ ಯೋಜನೆ ಬಿಡಿಸಿಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.