ADVERTISEMENT

ಜಮೀನು ವಿವಾದ: ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2011, 19:30 IST
Last Updated 11 ಏಪ್ರಿಲ್ 2011, 19:30 IST
ಜಮೀನು ವಿವಾದ: ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ
ಜಮೀನು ವಿವಾದ: ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ   

ಹಾಸನ: ಇಲ್ಲಿನ ಸಾಲಗಾಮೆ ರಸ್ತೆ ಬಾಗಡೇರಕೊಪ್ಪಲು ಗ್ರಾಮದ ಒಂದು ಎಕರೆ ಜಮೀನು ವಿವಾದ ಈಗ ತಾರಕಕ್ಕೆ  ಏರಿದ್ದು, ಸೋಮವಾರ ಶಾಸಕ ಎಚ್.ಎಸ್.ಪ್ರಕಾಶ್ ಹಾಗೂ ಸ್ಥಳೀಯರು ವಿವಾದಿತ ಜಾಗದಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಇಡೀ ದಿನ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಈ ಜಾಗವನ್ನು ಖರೀದಿಸಿದ್ದ ಪುನೀತ್ ಹಾಗೂ ಶರತ್ ಪೊಲೀಸ್ ಭದ್ರತೆಯೊಂದಿಗೆ ಜಾಗಕ್ಕೆ ಕಾಂಪೌಂಡ್  ನಿರ್ಮಿಸಲು ಬಂದಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಎಚ್.ಎಸ್.ಪ್ರಕಾಶ್ ಮತ್ತು ಅವರ ಸಹೋದರ, ನಗರಸಭೆ  ಸದಸ್ಯ ಅನಿಲ್‌ಕುಮಾರ್, ದೇವೇಂದ್ರ ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಪ್ರತಿಭಟನೆ ಆರಂಭಿಸಿದರು.

‘ಈ ಜಾಗ ಊರಿಗೆ ಸೇರಿದ್ದು, ಅನಧಿಕೃತವಾಗಿ ಇದನ್ನು ಮಾರಾಟ ಮಾಡಲಾಗಿದ್ದು, ಜಾಗಕ್ಕೆ ಸಂಬಂಧಿಸಿದ ದಾಖಲೆಗಳೇ ಇಲ್ಲ. ಯಾವುದೇ ಕಾರಣಕ್ಕೂ ಇದನ್ನು ಖಾಸಗಿ ಪಾಲಾಗಲು ಬಿಡುವುದಿಲ್ಲ’ ಎಂದರು.

ಒಂದೆಡೆ ಗ್ರಾಮಸ್ಥರು, ಮಹಿಳೆಯರು ಪ್ರತಿಭಟನೆ ನಡೆಸುತ್ತ ‘ಭೂಗಳ್ಳರಿಗೆ ಧಿಕ್ಕಾರ’ ಎಂಬ ಘೋಷಣೆ ಕೂಗುತ್ತಿದ್ದರೆ, ಇನ್ನೊಂದೆಡೆ ಶಾಸಕ ಪ್ರಕಾಶ್ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಸಂಜೆಯ ವೇಳೆಗೆ ಸ್ಥಳಕ್ಕೆ ಬಂದಿದ್ದ ಮಾಜಿ ಪ್ರಧಾನಿ ದೇವೇಗೌಡ ಎರಡೂ ಕಡೆಯವರನ್ನು ಕರೆದು ಮಾತುಕತೆ ನಡೆಸಿ ಶಾಂತಿ ಕಾಪಾಡಲು ಮನವಿ ಮಾಡಿ, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಪ್ರಕರಣ ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಜಾಗ ಗ್ರಾಮಕ್ಕೆ ಸೇರಿದ್ದಾಗಿರುವುದರಿಂದ ಬಿಟ್ಟುಕೊಡಬೇಕು ಎಂದು ಗ್ರಾಮಸ್ಥರು ಹಟ ಹಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.