ಹಿರಿಯೂರು: ನಗರದ ಪ್ರವಾಸಿ ಮಂದಿರ ವೃತ್ತದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಸೇರಿದಂತೆ ದಲಿತರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹಿರಿಯೂರಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್. ಮೂರ್ತಿ ಸ್ಥಾಪಿತ) ನೇತೃತ್ವದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಪಾದಯಾತ್ರೆಗೆ ಬುಧವಾರ ಚಾಲನೆ ನೀಡಲಾಯಿತು.
ವಿಎಸ್ಎಲ್ ಕಂಪೆನಿ ಬಿಡದಿಯ ಶಿಲ್ಪಿ ಅಶೋಕ್ ಗುಡಿಕಾರ್ ಅವರಿಂದ ರೂ 5 ಲಕ್ಷ ವೆಚ್ಚದ ಕಂಚಿನ ಪ್ರತಿಮೆ ತಯಾರಿಸಿ, ಎರಡು ವರ್ಷದ ಹಿಂದೆಯೇ ತಂದಿರಿಸಿದ್ದುರು. ಆದರೆ, ಎರಡು ವರ್ಷ ಕಳೆದರೂ ಪ್ರತಿಮೆ ಪ್ರತಿಷ್ಠಾಪನೆ ಮಾಡದಿರುವುದು ಸಂವಿಧಾನ ಶಿಲ್ಪಿಗೆ ಅಗೌರವ ಸೂಚಿಸಿದಂತೆ ಎಂದು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಕೆ. ತಿಮ್ಮರಾಜು ಆರೋಪಿಸಿದರು.
ಕತ್ತೆಹೊಳೆ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ನೀಡಬೇಕು. ಸುಜಲ ಜಲಾನಯನ ಹೊಂಡಕ್ಕೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ದಲಿತ ಬಾಲಕ ಸಂಪತ್ಕುಮಾರ್ ಕುಟುಂಬಕ್ಕೆ ರೂ 5 ಲಕ್ಷ ಪರಿಹಾರ ನೀಡಬೇಕೆಂದು ತಿಳಿಸಿದರು.
ತಾಲ್ಲೂಕು ಲಂಬಾಣಿ ಜನಾಂಗದ ಅಧ್ಯಕ್ಷ ಗಂಗಾಧರ್, ಡಾ.ಸುಜಾತಾ, ಹನುಮಂತರಾಯಪ್ಪ, ಎಂ.ಎಲ್. ಗಿರಿಧರ್, ಸೂರಗೊಂಡನಹಳ್ಳಿ ಕೃಷ್ಣಮೂರ್ತಿ, ಹನುಮಂತಪ್ಪ, ಭರಂಪುರ ಮಲ್ಲಪ್ಪ, ಸರ್ಪಭೂಷಣ, ಭೂತೇಶ್, ರಂಗಸ್ವಾಮಿ, ಕೆ.ಪಿ. ಶ್ರೀನಿವಾಸಮೂರ್ತಿ, ಪ್ರಕಾಶ್, ನಂದಕುಮಾರ್, ಶಿವಶಂಕರ್,ಶ್ರೀಧರ್ಘಾಟ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.