ADVERTISEMENT

ನಗರಸಭೆ ಅಧ್ಯಕ್ಷರಾಗಿ ಶಂಕರ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 20:15 IST
Last Updated 20 ಜನವರಿ 2011, 20:15 IST

ಹಾಸನ: ಹಾಸನ ನಗರಸಭೆಯ ನೂತನ ಅಧ್ಯಕ್ಷರಾಗಿ ಜೆಡಿಎಸ್‌ನ ಸಿ.ಆರ್. ಶಂಕರ್ ಅವಿರೋಧವಾಗಿ ಆಯ್ಕೆಯಾದರು. ಜನವರಿ 1ರಂದು ಎಚ್.ಸಿ. ರಂಗಸ್ವಾಮಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು.

ರಂಗಸ್ವಾಮಿ ಅವರ ಆಯ್ಕೆಯ ಸಂದರ್ಭದಲ್ಲೇ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಸಿ.ಆರ್. ಶಂಕರ್ ಅವರು ಆಗ ಅವಕಾಶ ಲಭ್ಯವಾಗದಿರುವುದಕ್ಕೆ ಪಕ್ಷದ ಮುಖಂಡರ ವಿರುದ್ಧವೇ ಕಿಡಿಕಾರಿದ್ದರು. ಆದರೆ, ಕೆಲವೇ ದಿನಗಳಲ್ಲಿ ಮತ್ತೆ ಪಕ್ಷದಲ್ಲಿ ತೊಡಗಿಸಿಕೊಂಡಿದ್ದ ಅವರಿಗೆ, ಈಗ ಅಧ್ಯಕ್ಷರ ಸ್ಥಾನ ಲಭಿಸಿದೆ.

ಗುರುವಾರ ಬೆಳಿಗ್ಗೆ 11 ಗಂಟೆಗೆ ಹಾಸನ ಉಪ ವಿಭಾಗಾಧಿಕಾರಿ ನಾಗರಾಜ್ ಅವರು ಚುನಾವಣಾ ಪ್ರಕ್ರಿಯೆ ಆರಂಭಿಸಿದರು. ಮಧ್ಯಾಹ್ನದವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಸಿ.ಆರ್. ಶಂಕರ್ ಅಲ್ಲದೆ ಎಚ್.ಎಲ್. ವಿಜಯಕುಮಾರ್ ಹಾಗೂ ಎಚ್.ಕೆ. ಯೋಗೇಂದ್ರ ಕುಮಾರ್ ಅವರೂ ನಾಮಪತ್ರ ಸಲ್ಲಿಸಿದ್ದರು.

ಮಧ್ಯಾಹ್ನ ಮೂರು ಗಂಟೆಗೆ ನಾಮಪತ್ರಗಳ ಪರಿಶೀಲನೆ ನಡೆಸಿ 3.15ರವರೆಗೆ ನಾಮಪತ್ರ ಹಿಂತೆಗೆದುಕೊಳ್ಳಲು ಅವಕಾಶ ನೀಡಲಾಯಿತು. ಪಕ್ಷದ ಮುಖಂಡರ ಸೂಚನೆಯಂತೆ ಎಚ್.ಎಲ್. ವಿಜಯಕುಮಾರ್ ಹಾಗೂ ಎಚ್.ಕೆ. ಯೋಗೇಂದ್ರ ಕುಮಾರ್ ಅವರು ನಾಮಪತ್ರ್ನ ಹಿಂತೆಗೆಕೊಂಡ ಕಾರಣ ಶಂಕರ್ ಅವರು ಅವಿರೋಧವಾಗಿ ಆಯ್ಕೆದರು.

ನಗರಸಭೆಯ ಒಟ್ಟಾರೆ 35 ಮಂದಿ ಸದಸ್ಯರಲ್ಲಿ ಇಬ್ಬರು ನಿಧನಹೊಂದಿದ್ದು, ಉಳಿದ 33ರಲ್ಲಿ 30 ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಶಾಸಕ ಎಚ್.ಎಸ್. ಪ್ರಕಾಶ್ ಅವರೂ ಉಪಸ್ಥಿತರಿದ್ದರು. ನಗರಸಭೆಯ ಆಯುಕ್ತ ಶಿವನಂಜೇಗೌಡ, ತರಬೇತಿಯಲ್ಲಿರುವ ಮುಖ್ಯಾಧಿಕಾರಿ ಶ್ರೀಮಾಧ್ವಿ ಹಾಗೂ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.