ಕಡೂರು: ವೃತ್ತಿಗೇ ಧಕ್ಕೆಯಾಗುವಂತೆ ಕೇಂದ್ರ ಸರ್ಕಾರ ವಕೀಲರ ವೃತ್ತಿಗೆ ಸಂಬಂಧಿಸಿದ ಕಾಯ್ದೆಗೆ ತಿದ್ದುಪಡಿ ತರುತ್ತಿರುವುದನ್ನು ವಿರೋಧಿಸಿ ತಾಲ್ಲೂಕು ವಕೀಲರ ಸಂಘದ ಸದಸ್ಯರು ಗುರುವಾರ ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ತೋಳಿಗೆ ಕೆಂಪು ಪಟ್ಟಿ ಧರಿಸಿ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಘೋಷಣೆ ಕೂಗಿದರು.ಕರ್ನಾಟಕ ರಾಜ್ಯ ವಕೀಲರ ಪರಿಷತ್ ಕರೆ ಮೇರೆಗೆ ಗುರುವಾರ ನ್ಯಾಯಾಲಯದ ಕಲಾಪ ಬಹಿಷ್ಕರಿಸಿರುವುದಾಗಿ ವಕೀಲರ ಸಂಘದ ಅಧ್ಯಕ್ಷ ಸಿ.ಜೆ.ಮಂಜುನಾಥ್ ತಿಳಿಸಿದರು.
ವಕೀಲರ ವೃತ್ತಿ ಹಾಗೂ ಹಕ್ಕುಗಳಿಗೆ ಧಕ್ಕೆ ಬರುವ ಕೆಲವು ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದ್ದು, ಕೂಡಲೇ ಈ ತಿದ್ದುಪಡಿಗಳನ್ನು ವಾಪಸ್ ಪಡೆಯಬೇಕು. ತಿದ್ದುಪಡಿಗಳು ವಕೀಲರ ಮೇಲೆ ತೀವ್ರ ಸ್ವರೂಪದ ಪ್ರಭಾವ ಬೀರಲಿವೆ. ಕಕ್ಷಿದಾರರ ಪರ ಕಾರ್ಯನಿರ್ವಹಿಸಲು ತೊಂದರೆಯಾಗಲಿದೆ. ವಕೀಲರು ನ್ಯಾಯಾಧೀಶರ ಮತ್ತು ನ್ಯಾಯಾಂಗದ ಕೈಗೊಂಬೆಯಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಗಮನ ಸೆಳೆದರು.
ಸರ್ಕಾರ ವಕೀಲರ ಕಲ್ಯಾಣ ನಿಧಿಗೆ ತಿದ್ದುಪಡಿ ತಂದು ಕಕ್ಷಿದಾರರ ವಕಾಲತ್ತುಗಳಿಗೆ ರೂ. 25ರ ಸ್ಟ್ಯಾಂಪ್ ಹಾಕಬೇಕೆಂಬ ಕಾನೂನು ಮಾಡುತ್ತಿರುವುದನ್ನು ಸಂಘ ಸರ್ವಾನುಮತದಿಂದ ವಿರೋಧಿಸುತ್ತದೆ. ಈ ಎಲ್ಲಾ ತಿದ್ದುಪಡಿಗಳನ್ನು ಅನುಷ್ಠಾನಕ್ಕೆ ತರಬಾರದೆಂದು ಆಗ್ರಹಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಸಿ.ಜೆ.ಮಂಜುನಾಥ್, ಉಪಾಧ್ಯಕ್ಷ ಮರುಳಸಿದ್ದಪ್ಪ, ಕಾರ್ಯದರ್ಶಿ ಟಿ.ಗೋವಿಂದ ಸ್ವಾಮಿ, ಸಹ ಕಾರ್ಯದರ್ಶಿ ಮಲ್ಲೇಶಪ್ಪ, ವಕೀಲರಾದ ಕೆ.ಪಿ.ನೀಲಕಂಠಪ್ಪ, ಕೆ.ಎನ್. ಬೊಮ್ಮಣ್ಣ, ಟಿ.ವಿ.ಅಶೋಕ್ ಕುಮಾರ್, ಶಾಮ್, ಜಯಣ್ಣ, ವಿನುತ ಬಾಬು, ರೇಷ್ಮಾ ಹಾಗೂ ನೂರಾರು ವಕೀಲರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.