ADVERTISEMENT

ಪಕ್ಷಸಂಘಟನೆಗೆ ಒತ್ತು ನೀಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 19:30 IST
Last Updated 18 ಅಕ್ಟೋಬರ್ 2011, 19:30 IST

ದೇವನಹಳ್ಳಿ: ತಾಲ್ಲೂಕಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್ ಪಕ್ಷ ತನ್ನದೇ ಕಾರ್ಯಕರ್ತರ ಪಡೆಯನ್ನು ಹೊಂದಿದ್ದು, ಸಭೆ, ಸಮಾವೇಶ ನಡೆಸುವ ಮೂಲಕ ಮತ್ತಷ್ಟು ಸಂಘಟನೆಗೆ ಒತ್ತು ನೀಡಿ, ತಾಲ್ಲೂಕಿನ ಪಕ್ಷವನ್ನು ಸಂಘಟಿಸಬೇಕು ಎಂದು ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಕಾರ್ಯಕರ್ತರಿಗೆ ಕರೆ ನೀಡಿದರು.

ಪಟ್ಟಣದ ಬೈಚಾಪುರ ರಸ್ತೆ ಗಾರೆ ರವಿಕುಮಾರ್ ಬಡಾವಣೆಯಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರು ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ವ್ಯಕ್ತಿಗಿಂತ ಪಕ್ಷದ ಜಾತ್ಯತೀತ ಮೌಲ್ಯ ಹಾಗೂ ಸಿದ್ದಾಂತ ಮುಖ್ಯ. ಆದರೆ ಇತರೆ ಪಕ್ಷಗಳಲ್ಲಿನ ಕಾರ್ಯಕರ್ತರ ಹೊಡೆದಾಟ ಬಡಿದಾಟಗಳು ನಮ್ಮ ಪಕ್ಷದಲ್ಲಿಲ್ಲ ಎಂದರು.

ADVERTISEMENT

`ಪಂಚಾಯಿತಿ ಮತ್ತು ಹೋಬಳಿ ಹಾಗೂ ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಆಯ್ಕೆಯಲ್ಲಿ ಸಣ್ಣ ಪುಟ್ಟ ಗೊಂದಲಗಳಿದ್ದರೆ ಸ್ಥಳೀಯರ ಮುಖಂಡರೊಂದಿಗೆ ಕಾರ್ಯಕರ್ತರು ಚರ್ಚಿಸಿ   ಬಗೆಹರಿಸಿಕೊಳ್ಳಬೇಕು ಎಂದರು.

ಮಾಜಿ ಶಾಸಕ ಜಿ.ಚಂದ್ರಣ್ಣ ಮಾತನಾಡಿ, ಎಲ್ಲಾ ಪಕ್ಷಗಳಂತೆ ಜೆಡಿಎಸ್ ಪಕ್ಷದಲ್ಲಿಯೂ ಹೋಬಳಿ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಪರಿಶಿಷ್ಠ ಜಾತಿ ಮತ್ತು ವರ್ಗದ ಘಟಕ ರಚಿಸಲಾಗತ್ತಿದೆ. ಕನಿಷ್ಠ 25 ಕಾರ್ಯಕರ್ತರು ಸಮಿತಿಯಲ್ಲಿ ಇರುತ್ತಾರೆ. ಆದರೆ ಕೆಲವು ಹೋಬಳಿ ಮತ್ತು ತಾಲ್ಲೂಕು ಪದಾಧಿಕಾರಿಗಳ ಆಯ್ಕೆ ನಡೆದಿದೆ. ಇನ್ನುಳಿದ ಆಯ್ಕೆಗೆ ಸ್ಥಳೀಯ ಕಾರ್ಯಕರ್ತರ ಸಲಹೆ ಮತ್ತು ಸಮ್ಮತಿಯೊಂದಿಗೆ ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಜೆಡಿಎಸ್ ಮುಖಂಡ ಮನಗೊಂಡನಹಳ್ಳಿ ಹನುಮಂತೇಗೌಡ ಮಾತನಾಡಿ, ಕೇವಲ ಚುನಾವಣೆ ಸಂಧರ್ಭದಲ್ಲಿ ಕಾರ್ಯಕರ್ತರನ್ನು ನೆನಪು ಮಾಡುವುದು ಸರಿಯಲ್ಲ. ಅನೇಕ ಕಡೆ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಅಲ್ಲದೆ ಹೊಸದಾಗಿ ಪಕ್ಷಕ್ಕೆ  ಸೇರ್ಪಡೆಗೊಂಡವನ್ನು ನಿರ್ಲಕ್ಷಿಸುವುದು ಸರಿಯಲ್ಲ. ಆಯ್ಕೆಯಾದ ಪದಾಧಿಕಾರಿಗಳು ಹಾಗೂ ತಾಲ್ಲೂಕು ಹಾಗೂ ಜಿಲ್ಲಾ ಪ್ರಮುಖ ಮುಖಂಡರು ಕಾರ್ಯಕರ್ತರೊಂದಿಗೆ ಸೇತುಬಂಧವಾಗಿ ವಿಶ್ವಾಸದಿಂದ ಪಕ್ಷ ಬೆಳವಣಿಗೆಗೆ ಶ್ರಮಿಸಬೇಕು ಎಂದರು.

ಟಿಎಪಿಎಂಸಿಎಸ್ ಅಧ್ಯಕ್ಷ ಶ್ರಿನಿವಾಸ್ ಮಾತನಾಡಿ ಪಕ್ಷದ ಯಾವುದೇ ಘಟಕದ ಪದಾಧಿಕಾರಿಗಳ ಆಯ್ಕೆ ನಡೆದರೂ ಸ್ಥಳೀಯರ ಹಾಗೂ ಸಾಮಾನ್ಯ ಕಾರ್ಯಕರ್ತರ ಅಭಿಪ್ರಾಯ ಪಡೆಯಬೇಕು ಎಂದರು.

ಸಭೆಯ ಅಧ್ಯಕ್ಷತೆ ತಾಲ್ಲೂಕು ಜೆ.ಡಿ.ಎಸ್. ಅಧ್ಯಕ್ಷ ಮುನಿಶಾಮೇಗೌಡ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಕಾರ್ಯಾಧ್ಯಕ್ಷ ಆರ್.ಮುನೇಗೌಡ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಸಿ.ವೆಂಕಟೇಗೌಡ, ತಾ.ಪಂ ಅಧ್ಯಕ್ಷ ಬಿ.ಕೆ.ಶಿವಣ್ಣ, ಜಿ.ಪಂ ಸದಸ್ಯ ಬಿ.ಎಂ.ಬೀರಪ್ಪ, ಜಿ.ಪಂ ಮಾಜಿ ಅಧ್ಯಕ್ಷೆ ಶಾಂತಮ್ಮ, ಹಾಗೂ ಬಿ.ಮುನೇಗೌಡ, ಜಿ.ಪಂ.ಮಾಜಿ ಸದಸ್ಯ ಪಿಳ್ಳಮುನಿಶಾಮಪ್ಪ ಪುರಸಭೆ ಅಧ್ಯಕ್ಷೆ ರತ್ನಮ್ಮ  ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.