ಉಪ್ಪುಂದ (ಬೈಂದೂರು): `ಕರಾವಳಿ ರೈತರು ಮಳೆ ಆಧಾರಿತ ಬತ್ತವನ್ನಷ್ಟೇ ಬೆಳೆದರೆ ಆರ್ಥಿಕವಾಗಿ ಪ್ರಗತಿ ಸಾಧಿಸುವುದು ಸಾಧ್ಯವಿಲ್ಲ. ಬತ್ತದ ಬೆಳೆ ತೆಗೆದ ಬಳಿಕ ನೆಲಗಡಲೆ, ಕಲ್ಲಂಗಡಿ ಹಣ್ಣು ಮತ್ತಿತರ ಪೂರಕ ಬೆಳೆಗಳತ್ತ ಗಮನ ಹರಿಸಬೇಕು~ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ರೈತರಿಗೆ ಸಲಹೆ ನೀಡಿದರು.
ಸಂಘ ಪ್ರಾಯೋಜಿತ ರೈತಶಕ್ತಿ ರೈತಸೇವಾ ಕೂಟ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ ಜಂಟಿಯಾಗಿ ಖಂಬದಕೋಣೆ ನಿರ್ಮಲ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ನೆಲಗಡಲೆ, ಕಲ್ಲಂಗಡಿ ಮತ್ತು ತೋಟದ ಬೆಳೆಗಳ ಮಾಹಿತಿ ಶಿಬಿರ ಉದ್ಘಾಟಿಸಿದ ಅವರು, ಕರಾವಳಿಯ ಮರಳು ಮಿಶ್ರಿತ ಮಣ್ಣು ಈ ಬೆಳೆಗಳಿಗೆ ಸೂಕ್ತ. ಕಡಿಮೆ ನೀರು ಸಾಕಾಗುವ, ಅಲ್ಪಾವಧಿಯಲ್ಲಿ ಫಲ, ಉತ್ತಮ ಬೆಲೆ ತರುವ ಈ ಬೆಳೆಗಳು ಬಹಳ ಲಾಭದಾಯಕ ಎಂದರು.
ಖಂಬದಕೋಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕೆರ್ಗಾಲು ಅಧ್ಯಕ್ಷ ಸುಂದರ ಕೊಠಾರಿ, ಸಂಘದ ನಿರ್ದೇಶಕರಾದ ಮೋಹನ ಪೂಜಾರಿ, ಗುರುರಾಜ ಹೆಬ್ಬಾರ್, ಪ್ರಧಾನ ವ್ಯವಸ್ಥಾಪಕ ಯು.ಗಣಪಯ್ಯ ಗಾಣಿಗ, ವಸೂಲಿ ವ್ಯವಸ್ಥಾಪಕ ಕೆ.ಹಾವಳಿ, ವಿಷ್ಣು ಪೈ ಇದ್ದರು.
ವಿಜ್ಞಾನ ಕೇಂದ್ರದ ವಿಜ್ಞಾನಿ ಬಿ.ಧನಂಜಯ ಅವರು, ಕಲ್ಲಂಗಡಿ ಬೆಳೆ, ಬೀಜ, ಕೀಟ ನಿರ್ವಹಣೆ ಬಗ್ಗೆ,
ವಿಷಯತಜ್ಞ ಎಂ.ಅರ್.ಆನಂದ, ನೆಲಗಡಲೆ ಇಳುವರಿ ಹೆಚ್ಚಳದಲ್ಲಿ ಪೋಷಕಾಂಶದ ಪಾತ್ರ ಕುರಿತು, ಕೃಷಿ ಅಧಿಕಾರಿ ವಿ.ಎಚ್.ನಾಯಕ್ ತೋಟದ ಬೆಳೆಗಳ ವಿಚಾರವಾಗಿ ರೈತರಿಗೆ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.