ಚಳ್ಳಕೆರೆ: ಪುರಾತನ ಕಾಲದಿಂದಲೂ ಪಂಚ ಕಸುಬುಗಳನ್ನು ಮಾಡಿಕೊಂಡು ಬರುತ್ತಿರುವ ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಎಂದು ರಾಜ್ಯ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ. ನಂಜುಂಡಿ ಒತ್ತಾಯಿಸಿದರು.
ಚಳ್ಳಕೆರೆ ಪಟ್ಟಣದ ವಿಶ್ವಕರ್ಮ ಸಂಘಟನೆ ಶುಕ್ರವಾರ ಇಲ್ಲಿನ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಪೂಜಾ ಮಹೋತ್ಸವ ಹಾಗೂ ತಾಲ್ಲೂಕು ಸಮಾವೇಶದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ವಿವಿಧ ಕಡೆಗಳಲ್ಲಿ ಮಠಗಳನ್ನು ಸ್ಥಾಪಿಸಿಕೊಂಡು ಸಮುದಾಯದ ಸಂಘಟನೆಯಲ್ಲಿ ತೊಡಗಿರುವ 62 ವಿಶ್ವಕರ್ಮ ಮಠಗಳಿಗೆ ನಿವೇಶನ ಹಾಗೂ ಸಹಾಯಧನವನ್ನು ಸರ್ಕಾರ ನೀಡಬೇಕು ಎಂದು ಕೋರಿದರು.
ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಹಿಂದುಳಿದ ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ಸ್ಥಾನಮಾನ ಕಲ್ಪಿಸಿದವರಲ್ಲಿ ದೇವರಾಜ ಅರಸು ಮೊದಲಿಗರು ಎಂದು ಶ್ಲಾಘಿಸಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಬಿ.ಜೆ. ಪುಟ್ಟಸ್ವಾಮಿ ಮಾತನಾಡಿದರು.
ಹಿರಿಯೂರು ಚಿಗುಟು ಮಲ್ಲೇಶ್ವರ ಮಹಾ ಸಂಸ್ಥಾನ ಹಾಗೂ ಸದ್ಧರ್ಮ ಪೀಠದ ಜ್ಞಾನ ಭಾಸ್ಕರ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ವಿಶ್ವಕರ್ಮ ಯುವ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ವೀರೇಂದ್ರ ಇನಾಂದಾರ್, ಪುರಸಭೆ ಅಧ್ಯಕ್ಷೆ ಪಿ. ಶಂಷಾದ್, ಕೆ.ಟಿ. ಕುಮಾರಸ್ವಾಮಿ, ಸತ್ಯವತಿ, ಮಂಜುನಾಥಾಚಾರ್, ಸಿ.ಪಿ. ತಿಪ್ಪೇಸ್ವಾಮಿ, ಆರ್. ಪ್ರಸನ್ನಕುಮಾರ್, ಕೃಷ್ಣಾಚಾರ್, ಜಯವೀರಾಚಾರ್ ಇನ್ನಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.