ADVERTISEMENT

ಬಾಕಿ ಕಾಮಗಾರಿ ಪೂರ್ಣಗೊಳಿಸಲು ಅನುದಾನ

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 18:45 IST
Last Updated 20 ಜೂನ್ 2011, 18:45 IST

ಬೀದರ್: ಜಲನಿರ್ಮಲ ಯೋಜನೆ ಪ್ರಥಮ ಹಾಗೂ ಎರಡನೇ ಹಂತದಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯ ಅನುದಾನದ ಪ್ರಸ್ತಾವನೆ ಸಲ್ಲಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.
"
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ಜಲನಿರ್ಮಲ ಯೋಜನೆಯಡಿ ಪ್ರಥಮ ಹಾಗೂ ಎರಡನೇ ಹಂತದಲ್ಲಿ ಒಟ್ಟು 310 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ 273 ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆ ಸಮರ್ಪಕವಾಗಿ ನಡೆಯುತ್ತಿದೆ. ಇನ್ನುಳಿದಂತೆ 37 ಗ್ರಾಮಗಳಲ್ಲಿ ಸಮಸ್ಯೆಗಳು ಇವೆ. 12 ಕಡೆಗಳಲ್ಲಿ ನೀರಿನ ಮೂಲ ಸಮಸ್ಯೆಯಾಗಿದ್ದು, 14 ಗ್ರಾಮಗಳಲ್ಲಿ ನಿರ್ವಹಣೆ ಸಮಸ್ಯೆ ಇದೆ. ಮೂರು ಗ್ರಾಮಗಳಲ್ಲಿ ನೀರು ಪೂರೈಕೆ ಕೊಳವೆ ಕಾಮಗಾರಿ ಕೈಗೆತ್ತಿಕೊಳ್ಳಬೇಕಾಗಿದೆ ಎಂದು ಯೋಜನಾ ನಿರ್ದೇಶಕ ಸೂರ್ಯಕಾಂತ ತಿಳಿಸಿದರು.

ಜಲನಿರ್ಮಲ ಯೋಜನೆ ಕಾಮಗಾರಿ ಅನುಷ್ಠಾನದ ಪರಿಶೀಲನೆಯನ್ನು ಮೂರನೇ ತಂಡದ ಮೂಲಕ ನಡೆಸಬೇಕು. ಯೋಜನೆ ಪೂರ್ಣಗೊಳಿಸಿ ನೀರು ಪೂರೈಕೆ ಆರಂಭಿಸಲು ತೊಡಕಾಗಿರುವ ಸಣ್ಣ ಪುಟ್ಟ ಕಾಮಗಾರಿಗಳನ್ನು ಜಿಲ್ಲಾಮಟ್ಟದಲ್ಲಿಯೇ ಪೂರ್ಣಗೊಳಿಸಬಹುದಾಗಿದೆ. ಈ ಕುರಿತು ಸಮೀಕ್ಷೆ ನಡೆಸಿ ನೆರವಿಗಾಗಿ ಪ್ರಸ್ತಾಪ ಸಲ್ಲಿಸುವಂತೆ ಸೂಚನೆ ನೀಡಿದರು.

ಜಲನಿರ್ಮಲ ಯೋಜನೆ ಮೂರನೇ ಹಂತದಲ್ಲಿ 27 ಕಾಮಗಾರಿಗಳಿಗೆ 76 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ. ಇವುಗಳ ಪೈಕಿ 23 ಕಾಮಗಾರಿಗಳ ಟೆಂಡರ್ ಕರೆಯಲಾಗಿದೆ. ಐದು ಕಾಮಗಾರಿಗಳನ್ನು ಈಗಾಗಲೇ ಆರಂಭಿಸಲಾಗಿದೆ. ಈ ಯೋಜನೆ ಅಡಿಯಲ್ಲಿ 86 ಗ್ರಾಮಗಳಲ್ಲಿ ರಸ್ತೆ ಮತ್ತು ಒಳಚರಂಡಿ ನಿರ್ಮಾಣ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ಸೂರ್ಯಕಾಂತ ಹೇಳಿದರು.

ಜಿಲ್ಲೆಯಲ್ಲಿ 6,357 ಕುಡಿಯುವ ನೀರಿನ ಮೂಲಗಳು ಇವೆ. ಇವುಗಳ ಪೈಕಿ 3,776 ನೀರಿನ ಮೂಲಗಳ ಗುಣಮಟ್ಟ ಪರೀಕ್ಷೆ ಮಾಡಲಾಗಿದೆ. ಇವುಗಳ ಪೈಕಿ 18 ಕಡೆಗಳಲ್ಲಿ ಫ್ಲೋರೈಡ್ ಸೇರಿದಂತೆ 102 ನೀರಿನ ಮೂಲಗಳು ಕಲುಷಿತವಾಗಿರುವುದು ಕಂಡು ಬಂದಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿತೇಂದ್ರ ನಾಯಕ್ ತಿಳಿಸಿದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT