ಕಂಪ್ಲಿ: ಸೋಮವಾರ ಬೀಸಿದ ಭಾರಿ ಬಿರುಗಾಳಿಯಿಂದ ಪಟ್ಟಣ ಸೇರಿದಂತೆ ಹಲವೆಡೆ ವಿದ್ಯುತ್ ಕಂಬಗಳು, ಬೀದಿ ದೀಪಗಳು ನೆಲಕಚ್ಚಿವೆ. ವಿವಿಧೆಡೆ ವಿದ್ಯುತ್ ತಂತಿಗಳು ತುಂಡಾಗಿ ಪೂರೈಕೆಯಲ್ಲಿ ವ್ಯತ್ಯಯವಾದ ಘಟನೆಯೂ ನಡೆದಿದೆ.
ಸ್ಥಳೀಯ ಸಕ್ಕರೆ ಕಾರ್ಖಾನೆ ಬಳಿ ಲಿಂಗಾರೆಡ್ಡಿ ವೃತ್ತಕ್ಕೆ ಅಳವಡಿಸಿದ್ದ ಬೀದಿ ದೀಪಗಳು ಮತ್ತು ಪಕ್ಕದಲ್ಲಿದ್ದ ವಿದ್ಯುತ್ ಕಂಬ ಭಾರಿ ಬಿರುಗಾಳಿಯಿಂದ ನೆಲಕಚ್ಚಿವೆ. ಬೀದಿ ದೀಪಗಳು ಕಂಬದಿಂದ ಬೇರ್ಪಟ್ಟು, ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ತಂತಿಗಳು ತುಂಡಾಗಿವೆ. ಅದೇ ರೀತಿ ವಿದ್ಯುತ್ ಕಂಬ ಹೋಟೆಲ್ ಮುಂಭಾಗದ ತಗಡುಗಳ ಮೇಲೆ ಬಿದ್ದಿದೆ. ಈ ಸಂದರ್ಭದಲ್ಲಿ ಹೋಟೆಲ್ ಬಂದ್ ಆಗಿದ್ದರಿಂದ ಯಾವುದೇ ಪ್ರಾಣಹಾನಿ ಆಗಿಲ್ಲ.
ಜೆಸ್ಕಾಂ ಕಚೇರಿ ಎದುರಿನ ಶೆಡ್ನ ತಗಡುಗಳು ಬಿರುಗಾಳಿಗೆ ಹಾರಿಹೋಗಿ, ವಿದ್ಯುತ್ ತಂತಿಗಳು ತುಂಡಾದ ಘಟನೆಯೂ ನಡೆದಿದೆ. ತಕ್ಷಣ ಎಚ್ಚೆತ್ತ ಜೆಸ್ಕಾಂ ಸಿಬ್ಬಂದಿ, ವಿದ್ಯುತ್ ಸ್ಥಗಿತಗೊಳಿಸಿ ಮುಂದಾಗುವ ಅನಾಹುತ ತಪ್ಪಿಸಿದ್ದಾರೆ. ಬಿರುಗಾಳಿಗೆ ಮುದ್ದಾಪುರದಲ್ಲಿ ಒಂದು ವಿದ್ಯುತ್ ಕಂಬ ಮತ್ತು ಬೆಳಗೋಡುಹಾಳಿನಲ್ಲಿ ಎರಡು ವಿದ್ಯುತ್ ಕಂಬಗಳು ತುಂಡಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕಂಪ್ಲಿಯ 33 ಕೆ.ವಿ. ವಿದ್ಯುತ್ ಸರಬರಾಜು ಕೇಂದ್ರಕ್ಕೆ ಗಂಗಾವತಿಯಿಂದ ಪೂರೈಕೆಯಾಗುವ ವಿದ್ಯುತ್ ತಂತಿ ತುಂಡಾಗಿದ್ದರಿಂದ ಹೋಬಳಿ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಸಂಜೆಯಾದರೂ ವಿದ್ಯುತ್ ಸರಬರಾಜು ಇಲ್ಲದೆ ತೊಂದರೆಯಾಯಿತು. ಹಳ್ಳಿಗಳಲ್ಲಿ ಕುಡಿಯುವ ನೀರಿನ ತೊಂದರೆಯಾದರೆ ಪಂಪ್ಸೆಟ್, ಕೊಳವೆ ಬಾವಿಯುಳ್ಳ ರೈತರು ವಿದ್ಯುತ್ಗಾಗಿ ಸುಮಾರು ಆರು ತಾಸುಗಳ ಕಾಲ ಕಾಯಬೇಕಾಯಿತು.
`ಬಿರುಗಾಳಿಯಿಂದ ಉಂಟಾದ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಲಾಗಿದ್ದು, ಅಲ್ಲಲ್ಲಿ ತುಂಡಾದ ವಿದ್ಯುತ್ ಕಂಬಗಳನ್ನು ತೆಗೆದು, ಹೊಸ ವಿದ್ಯುತ್ ಕಂಬಗಳನ್ನು ಶೀಘ್ರದಲ್ಲಿ ಅಳವಡಿಸಲಾಗುವುದು` ಎಂದು ಜೆಸ್ಕಾಂ ಜೂನಿಯರ್ ಎಂಜಿನಿಯರ್ ಕೆ. ಶ್ರೀನಿವಾಸ ಪ್ರಸಾದ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.