ಬೀದರ್: ಎಚ್ಐವಿ/ಏಡ್ಸ್ ಕುರಿತು ಸಮಗ್ರ ಮಾಹಿತಿ ಒದಗಿಸುವ ರೆಡ್ ರಿಬ್ಬನ್ ಎಕ್ಸ್ಪ್ರೆಸ್ ರೈಲು ಶುಕ್ರವಾರ ನಗರಕ್ಕೆ ಆಗಮಿಸಿತು.ಏಪ್ರಿಲ್ 13 ರಂದು ಮತ್ತು 14 ರಂದು ಈ ರೈಲು ಬೀದರ್ ರೈಲು ನಿಲ್ದಾಣದಲ್ಲಿ ತಂಗಲಿದೆ.
ನವದೆಹಲಿಯಿಂದ ಜನವರಿ ತಿಂಗಳಲ್ಲಿ ಹೊರಟಿರುವ ರೈಲು ಈಗಾಗಲೇ 170 ಕ್ಕೂ ಅಧಿಕ ಜಿಲ್ಲೆಗಳನ್ನು ಕ್ರಮಿಸಿ ಬೀದರ್ಗೆ ಆಗಮಿಸಿದೆ. ಸಂಚಾರಿ ರೈಲಿನ ಮೂಲಕ ಎಚ್ಐವಿ/ ಏಡ್ಸ್ ಕುರಿತು ಜಾಗೃತಿ ಮೂಡಿಸುವ ವಿನೂತನ ಪ್ರಯೋಗ ಇದಾಗಿದೆ.
ರೈಲಿನಲ್ಲಿ ಎಂಟು ಬೋಗಿಗಳಿವೆ. ಮೊದಲಿನ ನಾಲ್ಕು ಬೋಗಿಗಳಲ್ಲಿ ವಸ್ತು ಪ್ರದರ್ಶನವಿದೆ. ಇಲ್ಲಿ ಎಚ್ಐವಿ ಏಡ್ಸ್ಗೆ ಸಂಬಂಧಿಸಿದ ವಿಷಯ, ಆರೋಗ್ಯ, ಸ್ವಚ್ಛತೆ, ಹಂದಿಜ್ವರ, ಕ್ಷಯ ಮೊದಲಾದವುಗಳ ಕುರಿತು ಅರಿವು ಮೂಡಿಸುವ ಸಾಮಗ್ರಿಗಳನ್ನು ಪ್ರದರ್ಶಿಸಲಾಗಿದೆ.
ನಗರದ ರೈಲು ನಿಲ್ದಾಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಲಿಡ್ಕರ್ ಅಧ್ಯಕ್ಷ ರಾಜೇಂದ್ರ ವರ್ಮಾ ಉದ್ಘಾಟಿಸಿದರು. ಶಾಸಕ ರಹೀಮ್ಖಾನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಬಂಡೆಪ್ಪ ಕಾಶೆಂಪೂರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಾಬುರಾವ್ ಕಾರಬಾರಿ, ಜಿಲ್ಲಾಧಿಕಾರಿ ಸಮೀರ್ ಶುಕ್ಲ ಮಾತನಾಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಾಬುರಾವ್ ಬೆಲ್ಲದ ಸ್ವಾಗತಿಸಿದರು. ಏಡ್ಸ್ ಪ್ರಿವೆನ್ಶನ್ ಸೊಸೈಟಿಯ ನಿರ್ದೇಶಕಿ ಸಲ್ಮಾ ಫಹೀಮ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೀರ್ ಅನೀಸ್ ಅಹಮ್ಮದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಮರ್ತೂರ್ಕರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.