ADVERTISEMENT

ಬೆಸ್ಕಾಂ ಕಚೇರಿಗೆ ರೈತರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 19:30 IST
Last Updated 1 ಅಕ್ಟೋಬರ್ 2011, 19:30 IST

ಚಿಕ್ಕಬಳ್ಳಾಪುರ: ನಿಯಮಿತವಾಗಿ ವಿದ್ಯುತ್ ಪೂರೈಸಬೇಕು, ವಿದ್ಯುತ್ ಸಂಬಂಧಿತದ ಸಮಸ್ಯೆ ಬಗೆಹರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ ಮುಖಂಡ ಯಲುವಹಳ್ಳಿ ಎನ್.ರಮೇಶ್ ನೇತೃತ್ವದಲ್ಲಿ ರೈತರು  ಬೆಸ್ಕಾಂ ಕಚೇರಿಗೆ ಶನಿವಾರ ಮುತ್ತಿಗೆ ಹಾಕಿದರು.

ನಗರದ ಪ್ರವಾಸಿ ಮಂದಿರದಿಂದ ಬೆಸ್ಕಾಂ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡ ಪ್ರತಿಭಟನಾಕಾರರು, `ವಿದ್ಯುತ್ ಅಸಮರ್ಪಕ ಪೂರೈಕೆಯಿಂದ ಗ್ರಾಮೀಣ ಪ್ರದೇಶದಲ್ಲಿ ಭಾರಿ ಸಮಸ್ಯೆಯಾಗಿದೆ. ಇದರ ನಿವಾರಣೆಗೆ ಈ ಕೂಡಲೇ ಕ್ರಮ ಕೈಗೊಳ್ಳಬೇಕು~ ಎಂದು ಆಗ್ರಹಿಸಿದರು.

ರೈತ ಮುಖಂಡ ಯಲುವಹಳ್ಳಿ ಎನ್.ರಮೇಶ್ ಮಾತನಾಡಿ, `ಮಳೆಯಿಲ್ಲದೆ ಈಗಾಗಲೇ ರೈತರು ಕಂಗಾಲಾಗಿದ್ದಾರೆ. ವಿದ್ಯುತ್ ಪೂರೈಕೆಯಲ್ಲೂ ತೊಂದರೆಯಾದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಜಿಲ್ಲೆಯ ಬಹುತೇಕ ಜನರು ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ~ ಎಂದರು.

`ಜಿಲ್ಲೆಯ ರೈತರು ಅತಿ ಸೂಕ್ಷ್ಮ ಬೆಳೆಗಳಾದ ದ್ರಾಕ್ಷಿ, ಆಲೂಗಡ್ಡೆ, ರೇಷ್ಮೆ, ಹಿಪ್ಪುನೇರಳೆ, ರಾಗಿ ಮತ್ತು ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದು, ಕೊಳವೆಬಾವಿಗಳನ್ನು ಅವಲಂಬಿಸಿದ್ದಾರೆ. ಸಮರ್ಪಕ ವಿದ್ಯುತ್‌ಪೂರೈೆಯಿಲ್ಲದೆ ಕೊಳವೆ ಬಾವಿಗಳಿಂದ ನೀರು ಹರಿಸಲು ಆಗುವುದಿಲ್ಲ~ ಎಂದು ಹೇಳಿದರು.

ರೈತ ಮುಖಂಡರಾದ ಪುರುದಗದ್ದೆ ಕೃಷ್ಣಪ್ಪ, ಕಣಿತಹಳ್ಳಿ ವೆಂಕಟೇಶ್, ಮಂಚನಬಲೆ ಶ್ರೀಧರ್, ತಮ್ಮನಾಯಕನಹಳ್ಳಿ ಜಗದೀಶ್, ರವಿ, ನಾಯನಹಳ್ಳಿ ನವೀನ್, ಕಣಜೇನಹಳ್ಳಿ ಜಯರಾಮ, ಅರೂರು ರೆಡ್ಡಿ, ಮಂಚನಬಲೆ ಇಸ್ಮಾಯಿಲ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.