ಶಿವಮೊಗ್ಗ: ಸಮಾಜದಲ್ಲಿ ಸ್ತ್ರೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆಯಿಂದ ಮುಕ್ತಗೊಳಿಸುವ ಬಗ್ಗೆ ರೂಪಕದ ಮೂಲಕ ಮಹಿಳೆಯರು ವಿನೂತನ ಜಾಗೃತಿ ಕಾರ್ಯಕ್ರಮ ನಡೆಸಿದರು. ನಿರ್ಮಲ ಮಹಿಳಾ ಮಂಡಳಿಗಳ ಒಕ್ಕೂಟದ ನೇತೃತ್ವದಲ್ಲಿ ಮಂಗಳವಾರ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಗೋಪಿವೃತ್ತದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರು ವಿಶಿಷ್ಟ ವೇಷ-ಭೂಷಣಗಳನ್ನು ಧರಿಸಿ, ಸ್ತ್ರೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕಿರುಕುಳವನ್ನು ರೂಪಕದ ಮೂಲಕ ಬಿಚ್ಚಿಟ್ಟರು.
ನಿರಂತರವಾಗಿ ಮಹಿಳೆಯರ ಮೇಲಾಗುತ್ತಿರುವ ಲೈಂಗಿಕ ಕಿರುಕುಳ, ಲಿಂಗ ತಾರತಮ್ಯ, ವರದಕ್ಷಿಣೆ ಕಿರುಕುಳ, ಸಂಸಾರಿಕ ವಂಚನೆಗಳನ್ನು ಎಳೆಎಳೆಯಾಗಿ ತೋರಿಸಿದರು. ಅಲ್ಲದೇ, ಮಹಿಳೆಯರನ್ನು ನಿಕೃಷ್ಟವಾಗಿ ಕಾಣುವುದು ಸಲ್ಲದು ಎಂಬುದನ್ನು ಸಾರಿ ಹೇಳಿದರು. ಮಹಿಳೆಗೆ ಸಿಕ್ಕಿರುವ ಸಮಾನತೆ ಎಷ್ಟು? ಪುರುಷನಿಗೆ ಇಲ್ಲದ ಧಾರ್ಮಿಕ, ಸಾಮಾಜಿಕ ಕಟ್ಟುಪಾಡುಗಳು ಮಹಿಳೆಯರಿಗೇಕೆ? ಇಂದಿನ ಆಧುನಿಕ ಕಾಲಘಟ್ಟದಲ್ಲೂ ಮಹಿಳೆ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿರಬೇಕೆ ಎಂದು ಅನಕ್ಷರತೆ, ದೌರ್ಜನ್ಯ, ಶೋಷಣೆ, ಅತ್ಯಾಚಾರ ಎಂಬ ಸರಪಳಿಗಳನ್ನು ಕಿತ್ತುಹಾಕುವ ಮೂಲಕ ಮಹಿಳೆಯನ್ನು ಬಂಧಮುಕ್ತಗೊಳಿಸಿದರು.
‘ದೌರ್ಜನ್ಯ ಕೊನೆಯಾಗಲಿ’, ‘ತೂರಬೇಡಿ ಗಾಳಿಗೆ ಹೆಣ್ಣಿನ ಘನತೆಯ’, ’ಹೆಣ್ಣನ್ನು ಗೌರವಿಸಿ ಹಿಂಸಿಸಬೇಡಿ’ ಎಂಬ ಘೋಷಣೆಗಳು ಹಾಗೂ ಚಿತ್ರಗಳಿರುವ ಬ್ಯಾನರ್-ಫಲಕಗಳನ್ನು ಹಿಡಿದ ಮಹಿಳೆಯರು ಅರಿವು ಮೂಡಿಸುವ ಕೆಲಸ ಮಾಡಿದರು.ಮಾನವೀಯ ಸಮಾಜಕ್ಕೆ ಹಂಬಲಿಸುವ ಮನಸ್ಸುಗಳು ಒಂದಾಗಬೇಕು. ಮಹಿಳೆಯರ ಪ್ರಗತಿಯಾಗದೆ ಸಮಾಜದ ಸರ್ವಾಂಗೀಣಅಭಿವೃದ್ಧಿ ಸಾಧ್ಯವಿಲ್ಲ ಹಾಗೂ ಸಮಾಜದಲ್ಲಿನ ಗಂಭೀರ ಸಮಸ್ಯೆಗಳನ್ನು ಎದುರಿಸಲು ಆಗದು ಎಂದು ಒಕ್ಕೂಟದ ಸದಸ್ಯೆಯರು ತಿಳಿಸಿದರು. ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಶಾಸನ ಸಭೆಗಳಲ್ಲಿ ಶೇ. 50ರಷ್ಟು ಮೀಸಲಾತಿ ಸಿಗಬೇಕು. ಮಹಿಳಾ ರಕ್ಷಣಾ ಕಾನೂನು ಬಲಗೊಳ್ಳುವುದರ ಜತೆಗೆ ಜಾರಿಯಾಗಬೇಕು ಎಂದು ಒತ್ತಾಯಿಸಿದರು.ಸಿ. ತೆರೇಸಾ ಮತ್ತಿತರರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.