ADVERTISEMENT

ಮಾಸಾಶನ ಮಂಜೂರಾತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 19:30 IST
Last Updated 17 ಫೆಬ್ರುವರಿ 2012, 19:30 IST

ಚಿತ್ರದುರ್ಗ: ಮಾಸಾಶನ ಮಂಜೂರು ಮಾಡುವಂತೆ ಒತ್ತಾಯಿಸಿ ತಾಲ್ಲೂಕಿನ ಜೆ.ಎನ್.ಕೋಟೆ ಅಂಗವಿಕಲರು, ವಿಧವೆಯರು, ವಯೋವೃದ್ಧರು ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಮಾಸಾಶನ ತಮ್ಮ ಬದುಕಿಗೆ ನೆರವಾಗಿತ್ತು. ಆದರೆ, ಈಗ ಸರ್ಕಾರ ಹಲವಾರು ಕಾರಣಗಳನ್ನು ನೀಡಿ ತಡೆ ಹಿಡಿದಿರುವುದರಿಂದ ತಾವು ಬದುಕು ಸಾಗಿಸುವುದು ಕಷ್ಟವಾಗಿದೆ ಎಂದು ದೂರು ಸಲ್ಲಿಸಿದರು.

ಮಾಸಾಶನದಲ್ಲಿ ಔಷಧಿ ಹಾಗೂ ಇತರೆ ಖರ್ಚುಗಳನ್ನು ನಿಭಾಯಿಸಲಾಗುತ್ತಿತ್ತು. ಸರ್ಕಾರ ಈಗ ಸುಮಾರು 10 ತಿಂಗಳಿಂದ ಮಾಸಾಶನ ನೀಡಿಲ್ಲ. ತಮಗೆ ಕೂಲಿ ಕೆಲಸಕ್ಕೆ ಹೋಗಲು ಶಕ್ತಿ ಇಲ್ಲ. ಮಾಸಾಶನ ಒಂದೇ ತಮ್ಮ ಬದುಕಿಗೆ ಆಧಾರವಾಗಿತ್ತು. ಈಗ ಅದನ್ನು ನಿಲ್ಲಿಸಿರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ.ಔಷಧಿ ಖರೀದಿಗೂ ಹಣವಿಲ್ಲದೆ ಆರೋಗ್ಯ ಹದಗೆಡುತ್ತಿದೆ ಎಂದು ತಿಳಿಸಿದರು.

ಸಂಕಷ್ಟದಲ್ಲೇ ಬದುಕು ಸಾಗಿಸುವ ಅಂಗವಿಕಲರು, ವಿಧವೆಯರು, ವೃದ್ಧರಿಗೆ ಮಾಸಾಶನ ನಿಲ್ಲಿಸಿರುವುದು ತಪ್ಪು. ಪ್ರತಿನಿತ್ಯ ಸರ್ಕಾರಿ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಬಂದೊದಗಿದೆ. ಸರ್ಕಾರ ತಮ್ಮ ಬಗ್ಗೆ ಸಹಾನುಭೂತಿ ತೋರಿಸಲಿ ಎಂದು ಕೋರಿದರು.

ಸಾಮಾಜಿಕ ಭದ್ರತಾ ಯೋಜನೆಯ ನಿಜವಾದ ಫಲಾನುಭವಿಗಳನ್ನು ಗುರುತಿಸಿ ಸರ್ಕಾರ ಮಾಸಾಶನ ನೀಡಲಿ. ಆದರೆ ಈ ಕಾರ್ಯವನ್ನು ತ್ವರಿತ ಗತಿಯಲ್ಲಿ ಕೈಗೊಳ್ಳಲಿ. ಅಲ್ಲಿವರೆಗೂ ಮಾಸಾಶನ ನಿಲ್ಲಿಸುವುದು ಬೇಡ. ನಿಜವಾದ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ತಲುಪಬೇಕೆನ್ನುವುದು ತಮ್ಮ ಆಶಯ.
 
ಆದರೆ, ಈ ಬಗ್ಗೆ ಯಾವುದೇ ರೀತಿಯ ವಿಳಂಬ ಸಲ್ಲದು. ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಆದ್ದರಿಂದ ತಮ್ಮ ಬದುಕಿಗೆ ಆಧಾರವಾಗಿರುವ ಮಾಸಾಶನವನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.