ADVERTISEMENT

ಮುಂದುವರಿದ ರಸ್ತೆ ತೆರವು ಕಾರ್ಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST
ಮುಂದುವರಿದ ರಸ್ತೆ ತೆರವು ಕಾರ್ಯ
ಮುಂದುವರಿದ ರಸ್ತೆ ತೆರವು ಕಾರ್ಯ   

ಕೋಲಾರ: ನಗರದ ಎಂ.ಬಿ.ರಸ್ತೆ ವಿಸ್ತರಣೆ ಸಲುವಾಗಿ ಕಟ್ಟಡಗಳ ಮೇಲಂತಸ್ತುಗಳನ್ನು ಗುರುವಾರ ತೆರವು ಮಾಡಲಾಯಿತು.

ಜ. 28ರಂದು ಕಾಮಗಾರಿ ಆರಂಭವಾದಾಗ ಮೊದಲಿಗೆ ನೆಲ ಅಂತಸ್ತಿನ ಗೋಡೆಗಳನ್ನಷ್ಟೆ ಕೆಡವಲಾಗಿತ್ತು. ಬುಧವಾರದವರೆಗೂ ಅದೇ ಕೆಲಸ ಮುಂದುವರಿದಿತ್ತು. ಇದೀಗ ಒಂದಕ್ಕಿಂತಲೂ ಹೆಚ್ಚು ಅಂತಸ್ತಿನ ಕಟ್ಟಡಗಳನ್ನು ಪೂರ್ಣವಾಗಿ ಕೆಡವಲಾಗುತ್ತಿದೆ.

ದೂಳಿನ ನಡುವೆಯೇ ನೂರಾರು ಮಂದಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಗುರುವಾರ ನಡೆದ ಕಾರ್ಯಾಚರಣೆ ವೀಕ್ಷಿಸಿದರು. ಇದರ ಜೊತೆಗೆ ಕಟ್ಟಡ ತ್ಯಾಜ್ಯವನ್ನು ಸ್ಥಳಾಂತರಿಸುವ ಕೆಲಸವೂ ನಡೆಯುತ್ತಿದೆ. ಕೆಲವೆಡೆ ಅಂಗಡಿ ಮಾಲೀಕರು ವ್ಯಾಪಾರ ನಡೆಸಿದ್ದರೆ, ಕೆಲವು ವ್ಯಾಪಾರಿಗಳು ಮಳಿಗೆಯನ್ನು ಸ್ಥಳಾಂತರಿಸಿದ್ದಾರೆ. ಇನ್ನೂ ಕೆಲವರು ವ್ಯಾಪಾರ ಸ್ಥಗಿತಗೊಳಿಸಿ ಕಟ್ಟಡ ತೆರವು ವೀಕ್ಷಣೆಯಲ್ಲಿ ತೊಡಗಿದ್ದರು.

ಈಗಾಗಲೇ ನೆಲಮಟ್ಟದಲ್ಲಿ ಗೋಡೆಗಳನ್ನು ನೆಲಸಮಗೊಳಿಸಲಾಗಿದೆ. ಹೀಗಾಗಿ ಮೇಲಂತಸ್ತಿನ ಗೋಡೆಗಳು ತಾವಾಗಿಯೇ ಕುಸಿದು ಯಾರಿಗಾದರೂ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಸಶಸ್ತ್ರ ಮೀಸಲು ಪಡೆ ಕಚೇರಿಯ ಬಳಿ, ಅಮ್ಮವಾರಿಪೇಟೆ ವೃತ್ತದ ಸಮೀಪದಲ್ಲಿರುವ ಎರಡು-ಮೂರು ಅಂತಸ್ತಿನ ಕಟ್ಟಡಗಳ ಮಾಲೀಕರಿಗೆ ಈಗಾಗಲೇ ಸೂಚನೆ ನೀಡಲಾಗಿದೆ.
 
ಆದರೂ ಮೇಲಂತಸ್ತಿನ ಗೋಡೆಗಳನ್ನು ತೆರವು ಮಾಡಲು ಕೆಲವರು ನಿರಾಕರಿಸುತ್ತಿದ್ದಾರೆ. ಕೆಲವರು ಸುಮ್ಮನಿದ್ದಾರೆ. ಒಂದೆರಡು ದಿನದಲ್ಲಿ ಇಲಾಖೆಯಿಂದಲೇ ಬೃಹತ್ ಯಂತ್ರಗಳನ್ನು ಬಳಸಿ ಕಟ್ಟಡ ಕೆಡವಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ.ಮುನಿಸ್ವಾಮಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.